ಹೊಸದಿಗಂತ ತುಮಕೂರು:
ಜನಸಾಮಾನ್ಯರು ಆರೋಗ್ಯ ವಿಚಾರದಲ್ಲಿ ಆರ್ಥಿಕ ಸಮಸ್ಯೆಯಿಂದ ಆನಾರೋಗ್ಯ ಪೀಡಿತರಾಗುವುದನ್ನು ತಪ್ಪಿಸುವ ಪ್ರಯತ್ನವಾಗಿ ಪರಮಪೂಜ್ಯರಾದ ಡಾ.ಶಿವಕುಮಾರ ಸ್ವಾಮೀಜಿಯವರ ಆಸ್ಪತ್ರೆಯಲ್ಲಿ ಉಚಿತ ಆರೋಗ್ಯ ಸೇವೆಯ ಜೊತೆಗೆ ಅಗ್ಗದ ದರದಲ್ಲಿ ಔಷಧಿಗಳು ದೊರೆಯುವ ಪ್ರಧಾನ ಮಂತ್ರಿ ಭಾರತೀಯ ಜನ ಔಷಧಿ ಕೇಂದ್ರ, ಆರಂಭಿಸಲಾಗಿದೆ ಎಂದು ಸಿದ್ಧಗಂಗಾ ಮಠಾಧ್ಯಕ್ಷರಾದ ಶ್ರೀ ಶ್ರೀ ಸಿದ್ಧಲಿಂಗ ಮಹಾಸ್ವಾಮೀಜಿಯವರು ತಿಳಿಸಿದರು.
ನಗರದ ಡಾ.ಶಿವಕುಮಾರಸ್ವಾಮೀಜಿ ಆಸ್ಪತ್ರೆಯಲ್ಲಿ ನೂತನ ಪ್ರಧಾನ ಮಂತ್ರಿ ಭಾರತೀಯ ಜನ ಔಷಧಿ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿ ಈಗಾಗಲೇ ಯಾವುದೇ ಶುಲ್ಕವಿಲ್ಲದೆ ಉಚಿತ ಶಸ್ತ್ರಚಿಕಿತ್ಸೆ ನಡೆಸುವುದರ ಜೊತೆಗೆ ಆಹಾರ,ಹಾಸಿಗೆ ಹಾಗೂ ವೈದ್ಯರು ಹಾಗೂ ನರ್ಸಿಂಗ್ ಶುಲ್ಕವನ್ನು ಉಚಿತವಾಗಿ ನೀಡಲಾಗುತ್ತಿದೆ. ಆದರೆ, ಔಷಧಗಳನ್ನ ಕೊಳ್ಳಲು ರೋಗಿಗಳಿಗೆ ಕಷ್ಟವಾಗುತ್ತಿದೆ ಎನ್ನುವ ಸಂದರ್ಭಗಳು ಕಾಣಿಸಿದ್ದರಿಂದ ಪ್ರಧಾನ ಮಂತ್ರಿ ಭಾರತೀಯ ಜನ ಔಷಧಿ ಕೇಂದ್ರವನ್ನು ಸ್ಥಾಪಿಸಲಾಗಿದ್ದು ಸುರಕ್ಷಿತ ಹಾಗೂ ಉತ್ತಮ ದರ್ಜೆಯ ಸೌಲಭ್ಯ ಒದಗಿಸಿ ಗ್ರಾಮೀಣ ಜನರಿಗೆ ಆರೋಗ್ಯ ಸೇವೆ ಒದಗಿಸುವುದು ನಮ್ಮ ಧ್ಯೇಯವಾಗಿದೆ ಎಂದರು.
ಸಿದ್ಧಗಂಗಾ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಟಿ.ಕೆ.ನಂಜುಂಡಪ್ಪ, ಜಂಟಿ ಕಾರ್ಯದರ್ಶಿ ಡಾ|| ಶಿವಕುಮಾರಯ್ಯ, ಸಿದ್ಧಗಂಗಾ ವೈದ್ಯಕೀಯ ಕಾಲೇಜಿನ ಕಾರ್ಯದರ್ಶಿ ಟಿ.ಎಂ.ಸ್ವಾಮಿ, ನಿರ್ದೇಶಕ ಡಾ.ಎಸ್.ಪರಮೇಶ್, ಪ್ರಾಚಾರ್ಯರಾದ ಡಾ.ಶಾಲಿನಿ, ವೈದ್ಯಕೀಯ ಮೇಲ್ವಿಚಾರಕ ಡಾ.ನಿರಂಜನಮೂರ್ತಿ, ಸಿಇಓ ಡಾ.ಸಂಜೀವ್ ಕುಮಾರ್, ಡಾ.ಚಂದ್ರಶೇಖರ್, ಡಾ.ಭೂಷಣ್, ಡಾ.ಕುಮಾರ್, ಡಾ.ಮಧು ಮುಂತಾದವರಿದ್ದರು.