ಹೊಸದಿಗಂತ ವರದಿ, ಅಂಕೋಲಾ:
ಭಾರೀ ಮಳೆಯ ಪರಿಣಾಮ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಕೊಂಬೆಟ್ಟು ಸರಕಾರಿ ಪದವಿ ಪೂರ್ವ ಕಾಲೇಜಿನ ದಕ್ಷಿಣ ಪಾರ್ಶ್ವದಲ್ಲಿರುವ ತಾಲೂಕು ಕ್ರೀಡಾಂಗಣದ ಬಳಿಯ ಮಣ್ಣಿನ ದಿಣ್ಣೆ ಕುಸಿತ ಉಂಟಾಗಿದೆ. ಇದರಿಂದಾಗಿ ದಿಣ್ಣೆಯ ಮೇಲಿರುವ ಕಾಲೇಜಿನ ಪ್ರೌಢ ಶಾಲಾ ವಿಭಾಗದ ವಿದ್ಯಾರ್ಥಿಗಳ ನೂತನ ಶೌಚಾಲಯ ಕಟ್ಟಡಕ್ಕೆ ಅಪಾಯ ಎದುರಾಗಿದೆ.
ತಾಲೂಕು ಕ್ರೀಡಾಂಗಣದ ಮೈದಾನದ ಕಾಮಗಾರಿ ವೇಳೆ ಅವೈಜ್ಞಾನಿಕವಾಗಿ ಮಣ್ಣು ಅಗೆದ ಪರಿಣಾಮವಾಗಿ ಈ ಭಾಗದಲ್ಲಿ ಪದೇ ಪದೇ ಮಣ್ಣು ಕುಸಿತ ಆಗುತ್ತಿದೆ. ಮಣ್ಣು ಕುಸಿತದಿಂದಾಗಿ ಈಗಾಗಲೇ ಶಾಲೆಯ ಬೆಳ್ಳಿಹಬ್ಬದ ಸಂದರ್ಭದಲ್ಲಿ ನಿರ್ಮಾಣಗೊಂಡ ಕಟ್ಟಡ ಬಿರುಕು ಬಿಟ್ಟಿದ್ದು ಅದನ್ನು ತೆರವು ಮಾಡಲು ಲೋಕೋಪಯೋಗಿ ಇಲಾಖೆ ಅದೇಶ ನೀಡಿತ್ತು.
ಇಲ್ಲಿ ಪದೇ ಪದೇ ಮಣ್ಣು ಕುಸಿಯುತ್ತಿರುವ ಪರಿಣಾಮವಾಗಿ ಕಳೆದ ವಾರ ಆವರಣ ಗೋಡೆ ಕುಸಿತು ಬಿದ್ದಿತ್ತು. ಈ ಕುರಿತು ಹೊಸ ದಿಗಂತ ಜೂ.29ರ ಸಂಚಿಕೆಯಲ್ಲಿ ವಿಶೇಷ ಲೇಖನ ಪ್ರಕಟಿಸಿ ಗಮನ ಸೆಳೆದಿತ್ತು. ಆದರೂ ಈ ಕುರಿತು ಯಾವುದೇ ತುರ್ತು ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಇಲಾಖೆ ಮುಂದಾಗಿಲ್ಲ.
ಇದೀಗ ಕ್ರೀಡಾಂಗಣದ ದಕ್ಷಿಣ ಭಾಗದಲ್ಲಿ ಭಾರೀ ಮಳೆಗೆ ಮತ್ತೆ ಮಣ್ಣು ಕುಸಿತವಾಗಿದ್ದು, ದಿಣ್ಣೆ ಕುಸಿತದಿಂದಾಗಿ ಹಳೆಯ ಶೌಚಾಲಯದ ಅಡಿಗಲ್ಲು ಕಾಣುವಂತಾಗಿದೆ. ಇದರ ಪಕ್ಕದಲ್ಲಿರುವ ಕಳೆದ ಶೈಕ್ಷಣಿಕ ವರ್ಷದಲ್ಲಿ ಹಿಂದಿನ ಶಾಸಕ ಸಂಜೀವ ಮಟನ್ದೂರು ಅನುದಾನದಲ್ಲಿ ನಿರ್ಮಾಣಗೊಂಡಿರುವ ನೂತನ ಪುರುಷರ ಶೌಚಾಲಯ ಕಟ್ಟಡಕ್ಕೆ ಅಪಾಯ ಉಂಟಾಗಿದೆ.
ಸ್ಥಳಕ್ಕೆ ಸ್ಥಳೀಯ ನಗರಸಭಾ ಸದಸ್ಯ ಪಿ.ಜಿ. ಜಗನ್ನಿವಾಸ ರಾವ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮೇಲ್ವಿಚಾರಕ ಶ್ರೀಕಾಂತ್ ಬಿರಾವು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ