February 10, 2026
Tuesday, February 10, 2026
spot_img

ಪಾಕ್ ಉಗ್ರರ ನೆಲೆಗಳ ಮೇಲೆ ‘ಹದ್ದಿನ ಕಣ್ಣು’! ತಕ್ಷಣದ ಕಾರ್ಯಾಚರಣೆಗೆ ಯಾವಾಗಲೂ ರೆಡಿ: ಜನರಲ್ ಉಪೇಂದ್ರ ದ್ವಿವೇದಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತೀಯ ಸೇನಾ ದಿನಾಚರಣೆಗೆ ಮುನ್ನ ನಡೆದ ವಾರ್ಷಿಕ ಪತ್ರಿಕಾಗೋಷ್ಠಿಯಲ್ಲಿ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ದೇಶದ ಭದ್ರತಾ ಸ್ಥಿತಿಗತಿಗಳ ಕುರಿತು ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಮಾಣೆಕ್ಷಾ ಕೇಂದ್ರದಲ್ಲಿ ನಡೆದ ಈ ಗೋಷ್ಠಿಯಲ್ಲಿ ಅವರು ಗಡಿಗಳಲ್ಲಿನ ಪರಿಸ್ಥಿತಿ, ಭಯೋತ್ಪಾದನೆ ವಿರುದ್ಧದ ಕಾರ್ಯಾಚರಣೆಗಳು ಹಾಗೂ ಸೇನೆಯ ಭವಿಷ್ಯದ ಯೋಜನೆಗಳ ಬಗ್ಗೆ ಸ್ಪಷ್ಟವಾಗಿ ಮಾತನಾಡಿದರು.

ಪಾಕಿಸ್ತಾನದ ಗಡಿಭಾಗಗಳಲ್ಲಿ ಭಾರತ ನಿರಂತರ ಎಚ್ಚರಿಕೆಯಲ್ಲಿ ಇದೆ ಎಂದು ಹೇಳಿದ ಅವರು, ಅಂತಾರಾಷ್ಟ್ರೀಯ ಗಡಿ ಹಾಗೂ ನಿಯಂತ್ರಣ ರೇಖೆಯ ಬಳಿ ಎಂಟು ಭಯೋತ್ಪಾದಕ ಶಿಬಿರಗಳು ಕಾರ್ಯನಿರ್ವಹಿಸುತ್ತಿರುವ ಮಾಹಿತಿ ಇದೆ ಎಂದರು. ಅವುಗಳ ಮೇಲೆ ಸೂಕ್ಷ್ಮ ನಿಗಾ ವಹಿಸಲಾಗಿದ್ದು, ಯಾವುದೇ ಕೃತ್ಯ ನಡೆದರೂ ತಕ್ಷಣ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಉತ್ತರ ಗಡಿಗಳಲ್ಲಿ ಚೀನಾ ಇರುವ ಸ್ಥಿತಿ ಕ್ರಮೇಣ ಸಹಜವಾಗುತ್ತಿದ್ದು, ಉನ್ನತ ಮಟ್ಟದ ಮಾತುಕತೆಗಳು ಸ್ಥಿರತೆಗೆ ಸಹಕಾರಿಯಾಗಿವೆ ಎಂದು ತಿಳಿಸಿದರು. ಜಮ್ಮು–ಕಾಶ್ಮೀರದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿ ಇದ್ದು, ಪಹಲ್ಗಾಮ್ ದಾಳಿ ಬಳಿಕ ತ್ವರಿತವಾಗಿ ಭದ್ರತಾ ಕ್ರಮಗಳನ್ನು ಜಾರಿಗೆ ತರಲಾಗಿದೆ ಎಂದರು.

ಮಣಿಪುರ ಹಾಗೂ ಈಶಾನ್ಯ ಪ್ರದೇಶಗಳಲ್ಲಿ ಪರಿಸ್ಥಿತಿ ನಿಧಾನವಾಗಿ ಸುಧಾರಿಸುತ್ತಿದ್ದು, ಸರ್ಕಾರ ಮತ್ತು ಭದ್ರತಾ ಪಡೆಗಳ ಸಂಯುಕ್ತ ಪ್ರಯತ್ನ ಫಲ ನೀಡುತ್ತಿದೆ ಎಂದು ಅವರು ಹೇಳಿದರು. ಸೇನೆಯ ಆಧುನೀಕರಣದ ಭಾಗವಾಗಿ ಸುಧಾರಿತ ಕ್ಷಿಪಣಿಗಳು, ಡ್ರೋನ್‌ಗಳು ಮತ್ತು ಯುದ್ಧೋಪಕರಣಗಳನ್ನು ಸೇರ್ಪಡೆಗೊಳಿಸಲಾಗುತ್ತಿದ್ದು, ಹೆಚ್ಚಿನ ಮದ್ದುಗುಂಡುಗಳನ್ನು ದೇಶದಲ್ಲೇ ಉತ್ಪಾದಿಸಲಾಗುತ್ತಿದೆ ಎಂದರು.

ಇದೇ ವೇಳೆ, 2026 ಅನ್ನು “ನೆಟ್‌ವರ್ಕ್ ಮತ್ತು ಡೇಟಾ ಆಧಾರಿತ ಕಾರ್ಯಾಚರಣೆಗಳ ವರ್ಷ” ಎಂದು ಘೋಷಿಸಿರುವುದಾಗಿ ಸೇನಾ ಮುಖ್ಯಸ್ಥರು ತಿಳಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !