May 15, 2026
Friday, May 15, 2026
spot_img

ದೇಶಕ್ಕೆ ಬರಗಾಲ? ಮುಂಗಾರು ಮಳೆಗೆ ಕಂಟಕವಾದ ಎಲ್ ನಿನೋ’, ಹವಾಮಾನ ಇಲಾಖೆಯಿಂದ ಎಚ್ಚರಿಕೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:
ಭಾರತವು ಇತ್ತೀಚಿನ ವರ್ಷಗಳಲ್ಲೇ ಅತ್ಯಂತ ಕಳವಳಕಾರಿ ಹವಾಮಾನ ಮುನ್ಸೂಚನೆಯೊಂದಿಗೆ ಮುಂಗಾರು ಹಂಗಾಮಿಗೆ ಹೆಜ್ಜೆ ಇಡುತ್ತಿದೆ. ಭಾರತೀಯ ಹವಾಮಾನ ಇಲಾಖೆ (IMD) ಏಪ್ರಿಲ್ 13 ರಂದು ಬಿಡುಗಡೆ ಮಾಡಿದ 2026ರ ಮೊದಲ ದೀರ್ಘಾವಧಿ ಮುನ್ಸೂಚನೆಯಲ್ಲಿ, ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ದೇಶದ ಪ್ರಮುಖ ಮಳೆಗಾಲವಾಗಿರುವ ನೈಋತ್ಯ ಮುಂಗಾರು ಈ ವರ್ಷ ಸಾಮಾನ್ಯಕ್ಕಿಂತ ಕಡಿಮೆಯಾಗುವ ಸಾಧ್ಯತೆಯಿದೆ ಎಂದು ಎಚ್ಚರಿಸಿದೆ.

ಇದಕ್ಕೆ ಮುಖ್ಯ ಕಾರಣ ಪೆಸಿಫಿಕ್ ಮಹಾಸಾಗರದಲ್ಲಿ ಈಗ ರೂಪುಗೊಳ್ಳುತ್ತಿರುವ ಐತಿಹಾಸಿಕ ತೀವ್ರತೆಯ ‘ಎಲ್ ನಿನೋ’ (El Nino) ವಿದ್ಯಮಾನ.

ಎಲ್ ನಿನೋ ಎನ್ನುವುದು ಮಧ್ಯ ಪೆಸಿಫಿಕ್ ಮಹಾಸಾಗರದ ಮೇಲ್ಮೈ ನೀರು ನಿಯತಕಾಲಿಕವಾಗಿ ಅತಿಯಾಗಿ ಕಾಯುವ ಪ್ರಕ್ರಿಯೆಯಾಗಿದ್ದು, ಇದು ಜಾಗತಿಕ ಹವಾಮಾನದ ಮಾದರಿಗಳನ್ನು ಏರುಪೇರು ಮಾಡುತ್ತದೆ. ಭಾರತದ ಮಟ್ಟಿಗೆ ಎಲ್ ನಿನೋ ಶಕ್ತಿಯುತವಾದಾಗ ಮುಂಗಾರು ಮಾರುತಗಳು ದುರ್ಬಲಗೊಳ್ಳುತ್ತವೆ. ಇದರಿಂದಾಗಿ ಮಳೆ ಪ್ರಮಾಣ ಕಡಿಮೆಯಾಗಿ ಬರಗಾಲ ಉಂಟಾಗುತ್ತದೆ. ದೇಶದ ಬಹುತೇಕ ಭಾಗಗಳಲ್ಲಿ ಮಳೆ ಕೊರತೆಯಾದರೆ, ಇದೇ ಎಲ್ ನಿನೋ ತಮಿಳುನಾಡು ಮತ್ತು ಆಂಧ್ರಪ್ರದೇಶದ ಕರಾವಳಿ ಪ್ರದೇಶಗಳಲ್ಲಿ ಭಾರಿ ಮಳೆಯನ್ನು ತರುತ್ತದೆ.

ಪೆಸಿಫಿಕ್ ಮಹಾಸಾಗರವು ವೇಗವಾಗಿ ಕಾಯುತ್ತಿದ್ದು, ಜೂನ್ ಅಥವಾ ಜುಲೈ ವೇಳೆಗೆ ಎಲ್ ನಿನೋ ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿಯಾಗಲಿದೆ ಎಂದು ಹವಾಮಾನ ವಿಜ್ಞಾನಿ ಡಾ. ಮಾಧವನ್ ನಾಯರ್ ತಿಳಿಸಿದ್ದಾರೆ. ಇದು 1997 ಮತ್ತು 2015ರಲ್ಲಿ ಉಂಟಾಗಿದ್ದ ಅತ್ಯಂತ ತೀವ್ರ ಮಾದರಿಯ ಎಲ್ ನಿನೋ ಆಗುವ ಸಾಧ್ಯತೆಯಿದೆ ಎಂದು ಅವರು ಎಚ್ಚರಿಸಿದ್ದಾರೆ.

ಈ ವರ್ಷ ಮುಂಗಾರು ಮಳೆಯು ದೀರ್ಘಾವಧಿ ಸರಾಸರಿಯ (LPA) ಶೇ. 92 ರಷ್ಟು ಮಾತ್ರ ಇರಲಿದೆ ಎಂದು IMD ಅಂದಾಜಿಸಿದೆ. 1971 ರಿಂದ 2020 ರವರೆಗಿನ ದತ್ತಾಂಶದ ಆಧಾರದ ಮೇಲೆ ದೇಶದ ಮುಂಗಾರು ಮಳೆಯ ಸರಾಸರಿ ಪ್ರಮಾಣ ಸುಮಾರು 870 ಮಿಮೀ ಇರುತ್ತದೆ. ಈ ಬಾರಿ ಮಳೆ ಪ್ರಮಾಣ ಶೇ. 90 ಕ್ಕಿಂತ ಕಡಿಮೆಯಾಗುವ ಸಾಧ್ಯತೆ ಶೇ. 35 ರಷ್ಟಿದೆ.

ಭಾರತದ ಪ್ರಮುಖ ಖಾಸಗಿ ಹವಾಮಾನ ಮುನ್ಸೂಚನೆ ಸಂಸ್ಥೆಯಾದ ‘ಸ್ಕೈಮೆಟ್’ (Skymet) ಮತ್ತು ಐಎಂಡಿ ಎರಡೂ ನೀಡಿರುವ ವರದಿಯ ಪ್ರಕಾರ, ಮುಂಗಾರಿನ ಮೊದಲಾರ್ಧ ಅಂದರೆ ವಿಶೇಷವಾಗಿ ಜೂನ್ ತಿಂಗಳು ಸ್ಥಿರವಾಗಿರುತ್ತದೆ. ಆದರೆ ಅಸಲಿ ಸಮಸ್ಯೆ ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ಆರಂಭವಾಗಲಿದ್ದು, ಈ ಅವಧಿಯಲ್ಲಿ ಎಲ್ ನಿನೋ ತನ್ನ ಸಂಪೂರ್ಣ ಪ್ರಭಾವ ಬೀರಿ ಮಳೆಯನ್ನು ಕಸಿದುಕೊಳ್ಳಲಿದೆ ಎಂದು ತಿಳಿಸಿವೆ.

ಭಾರತದ ಉತ್ತರ, ಪಶ್ಚಿಮ ಮತ್ತು ಮಧ್ಯ ಭಾಗಗಳು ತೀವ್ರ ಒಣ ಹವಾಮಾನ ಮತ್ತು ದೀರ್ಘಕಾಲದ ಬರಗಾಲದೊಂದಿಗೆ ಕೃಷಿ ನಷ್ಟವನ್ನು ಎದುರಿಸಲಿವೆ.

ಪಂಜಾಬ್, ಹರಿಯಾಣ ಮತ್ತು ರಾಜಸ್ಥಾನ ಆಗಸ್ಟ್-ಸೆಪ್ಟೆಂಬರ್‌ನಲ್ಲಿ ತೀವ್ರ ತೊಂದರೆಗೆ ಸಿಲುಕಲಿವೆ. ಇಂದೋರ್, ಉಜ್ಜಯಿನಿ, ಗ್ವಾಲಿಯರ್, ಚಂಬಲ್, ಜಬಲ್ಪುರ್, ರೇವಾ, ಶಾಡೋಲ್, ಸಾಗರ್ ಮತ್ತು ನರ್ಮದಾದಾಪುರಂ ಭಾಗಗಳಲ್ಲಿ ಮಳೆ ಸಾಮಾನ್ಯಕ್ಕಿಂತ ತೀರಾ ಕಡಿಮೆಯಿರಲಿದೆ.

ಲಡಾಖ್, ಈಶಾನ್ಯ ರಾಜ್ಯಗಳು ಮತ್ತು ತೆಲಂಗಾಣ ಸೇರಿದಂತೆ ದಕ್ಷಿಣ ಪೆನಿನ್ಸುಲಾದ ಕೆಲವು ಭಾಗಗಳು ಮಾತ್ರ ಈ ಮಳೆ ಕೊರತೆಯಿಂದ ಪಾರಾಗಲಿವೆ. ಇದೇ ಅವಧಿಯಲ್ಲಿ ಚೆನ್ನೈನಂತಹ ನಗರಗಳಲ್ಲಿ ಅತಿಯಾದ ಮಳೆಯಾಗಿ ಭಾರಿ ಪ್ರವಾಹ ಮತ್ತು ವಿನಾಶ ಉಂಟಾಗುವ ಸಾಧ್ಯತೆಯಿದೆ.

ಮಳೆಯನ್ನು ನಂಬಿಕೊಂಡಿರುವ ಭಾರತದ ಕೃಷಿ ವಲಯಕ್ಕೆ ಇದು ಹೊಸದೇನಲ್ಲ. 2015-16ರ ಸೂಪರ್ ಎಲ್ ನಿನೋ ಸಮಯದಲ್ಲಿ ದೇಶದಲ್ಲಿ ಸರಾಸರಿಗಿಂತ ಶೇ. 86 ರಷ್ಟು ಕಡಿಮೆ ಮಳೆಯಾಗಿ ದೇಶಾದ್ಯಂತ ಭೀಕರ ಬರಗಾಲ ಉಂಟಾಗಿತ್ತು. ಮಹಾರಾಷ್ಟ್ರದ ಮರಾಠವಾಡ ಪ್ರದೇಶವೊಂದರಲ್ಲೇ ಶೇ. 40 ರಷ್ಟು ಮಳೆ ಕೊರತೆಯಾಗಿ ಬೆಳೆ ನಾಶವಾಗಿತ್ತು. ಅದೇ ಸಮಯದಲ್ಲಿ ಚೆನ್ನೈ ನಗರವು ದಿನಗಟ್ಟಲೆ ನೀರಿನಲ್ಲಿ ಮುಳುಗಿ ಭಾರಿ ಸಾವು-ನೋವು ಸಂಭವಿಸಿತ್ತು.

ಇತ್ತೀಚೆಗೆ 2023ರ ಎಲ್ ನಿನೋ ವರ್ಷದಲ್ಲೂ ಆಗಸ್ಟ್ ತಿಂಗಳಲ್ಲಿ ಶೇ. 36 ರಷ್ಟು ಮಳೆ ಕೊರತೆಯಾಗಿತ್ತು. ಭಾರತದ ಸಾಗುವಳಿ ಭೂಮಿಯ ಮೂರನೇ ಎರಡರಷ್ಟು ಭಾಗ ಸಂಪೂರ್ಣವಾಗಿ ಮಳೆಯನ್ನೇ ನಂಬಿಕೊಂಡಿರುವುದರಿಂದ ಈ ಬಾರಿ ಕೃಷಿ ಕ್ಷೇತ್ರಕ್ಕೆ ದೊಡ್ಡ ಸವಾಲು ಎದುರಾಗಲಿದೆ.

ಆದರೆ ಹವಾಮಾನ ಮಾದರಿಗಳು ಒಂದು ಸಣ್ಣ ಆಶಾವಾದವನ್ನು ತೋರಿಸಿವೆ. ಮುಂಗಾರು ಹಂಗಾಮಿನ ಅಂತ್ಯದ ವೇಳೆಗೆ ಪಶ್ಚಿಮ ಹಿಂದೂ ಮಹಾಸಾಗರದಲ್ಲಿ ‘ಇಂಡಿಯನ್ ಓಷನ್ ಡೈಪೋಲ್’ (IOD) ಧನಾತ್ಮಕವಾಗಿ (Positive) ಅಭಿವೃದ್ಧಿಯಾಗುವ ಸಾಧ್ಯತೆಯಿದೆ. ಇದು ಸಾಮಾನ್ಯವಾಗಿ ಭಾರತದಲ್ಲಿ ಉತ್ತಮ ಮಳೆಗೆ ಪೂರಕ ವಾತಾವರಣ ನಿರ್ಮಿಸುವುದರಿಂದ ಎಲ್ ನಿನೋ ಉಂಟುಮಾಡುವ ಹಾನಿಯನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಬಹುದು.

ಭಾರತದ ಶೇ. 60 ರಷ್ಟು ರೈತರು ಖಾರಿಫ್ ಬೆಳೆಗೆ ಮುಂಗಾರು ಮಳೆಯನ್ನೇ ನಂಬಿಕೊಂಡಿರುವುದರಿಂದ ಈ ವರ್ಷದ ಮಳೆ ಅತ್ಯಂತ ನಿರ್ಣಾಯಕವಾಗಿದೆ. ಮೇ ತಿಂಗಳ ಕೊನೆಯ ವಾರದಲ್ಲಿ ಬಿಡುಗಡೆಯಾಗಲಿರುವ ಐಎಂಡಿಯ ಮುಂದಿನ ವರದಿಯು ಈ ಎಲ್ ನಿನೋ ಚಕ್ರದ ಬಗ್ಗೆ ಇನ್ನಷ್ಟು ಸ್ಪಷ್ಟ ಚಿತ್ರಣ ನೀಡಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !