ಹೊಸದಿಗಂತ ಡಿಜಿಟಲ್ ಡೆಸ್ಕ್:
ವಯಸ್ಸಾದ ನಂತರ ಪೋಷಕರು ಮಕ್ಕಳಾಗ್ತಾರೆ, ಅವರನ್ನು ಪ್ರೀತಿಯಿಂದ ಕಾಳಜಿಯಿಂದ ನೋಡ್ಕೋಬೇಕು ಅನ್ನೋದು ಪ್ರತಿಯೊಬ್ಬ ಮಗುವಿಗೂ ಗೊತ್ತಿರಬೇಕಾದ ವಿಷಯ.
ಆದರೆ ಬದುಕಿಗೆ ಬೆಳಕು ಕೊಟ್ಟ ಪೋಷಕರನ್ನು ಬೀದಿಗೆ ಮಕ್ಕಳು ಬಿಟ್ಟಿದ್ದಾರೆ. ತುತ್ತು ಅನ್ನಕ್ಕೂ ಪರದಾಡಿ ಫೋಷಕರು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಹಾಸನದ ಕರಿಗೌಡ ಕಾಲೇನಿಯಲ್ಲಿ ಡೇನಿಯಲ್ ಹಾಗೂ ಪತ್ನಿ ಮೇರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಡೇನಿಯಲ್ ವಯಸ್ಸಿನಲ್ಲಿ ಮೇಸ್ತ್ರಿ ಕೆಲಸ ಮಾಡುತ್ತಿದ್ದರು. ನೆಲ್ಸನ್ ಹಾಗೂ ವಿಲ್ಸನ್ ಎನ್ನುವ ಇಬ್ಬರು ಗಂಡುಮಕ್ಕಳಿದ್ದಾರೆ.
ಕಷ್ಟ ಪಟ್ಟು ದುಡಿದ ಡೇನಿಯಲ್ ಕಾಫಿತೋಟ, ಮನೆ ಇನ್ನಿತರ ಆಸ್ತಿ ಮಾಡಿದ್ದರು. ಒಳ್ಳೆಯ ಹೆಣ್ಣುಮಕ್ಕಳನ್ನು ಮಕ್ಕಳಿಗೆ ಮದುವೆ ಮಾಡಿದ್ದರು. ಒಬ್ಬ ಮಗ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದರೆ, ಇನ್ನೊಬ್ಬ ಮಗ ಕಾಫಿ ತೋಟ ನೋಡಿಕೊಂಡಿದ್ದ.
ವೃದ್ಧರಾಗಿದ್ದ ಪೋಷಕರನ್ನು ನೋಡಿಕೊಳ್ಳಲು ಇಬ್ಬರು ಮಕ್ಕಳೂ ನಿರಾಕರಿಸಿದ್ದರು. ಊಟ ತಿಂಡಿ ನೀಡದೇ ಆಸ್ಪತ್ರೆಗೆ ಕರೆದುಕೊಂಡು ಹೋಗದೇ ಮನನೋಯಿಸಿದ್ದರು. ಇದರಿಂದ ದಂಪತಿ ಬೇಸರದಲ್ಲಿದ್ದರು.
ಮನೆಯಲ್ಲಿ ಇರಲು ಸಾಧ್ಯವಾಗದೇ ವಿರಾಜಪೇಟೆಯಲ್ಲಿ ವೃದ್ಧಾಶ್ರಮಕ್ಕೆ ಹೋಗಿದ್ದರು. ಆದರೆ ಅಲ್ಲಿರಲು ಆಗಿಲ್ಲ. ಮಾನಸಿಕವಾಗಿ ಇಬ್ಬರೂ ಕುಗ್ಗಿದ್ದರು. ರಾಜರಂತೆ ಬದುಕಿ ಬಾಳಿದವರಿಗೆ ವೃದ್ಧಶ್ರಮ ಒದಗಲಿಲ್ಲ.
ಬಸ್ನಲ್ಲಿ ಹೊರಟು ಬಂದು ರೈಲ್ವೆ ಟ್ರಾಕ್ಮೇಲೆ ಮಲಗಿ ಕ್ಷಣಮಾತ್ರದಲ್ಲಿ ಪ್ರಾಣಬಿಟ್ಟಿದ್ದಾರೆ. ಮಕ್ಕಳಿಗೆ ವಿಷಯ ತಿಳಿಸಿದಾಗ ಮೃತದೇಹ ತೆಗೆದುಕೊಂಡು ಹೋಗಲು ಬಂದಿಲ್ಲ. ಇತರ ಸಂಬಂಧಿಕರು ಮೃತದೇಹವನ್ನು ತೆಗೆದುಕೊಂಡು ಹೋಗಿದ್ದರು. ಪೋಷಕರ ಮೃತದೇಹ ನೋಡಿದ ಮಕ್ಕಳು ಒಂದು ಹನಿ ಕಣ್ಣೀರು ಹಾಕಿಲ್ಲ. ತಂದೆ ಕುಡಿಯುತ್ತಿದ್ದರು, ಜಗಳ ಮಾಡುತ್ತಿದ್ದರು, ಅವರಾಗೇ ಮನೆ ಬಿಟ್ಟು ಹೋಗಿದ್ದರು ಎಂದು ಮಕ್ಕಳು ಆರೋಪಿಸಿದ್ದಾರೆ.



