April 17, 2026
Friday, April 17, 2026
spot_img

ರಾಮ ನಾಮ ಪಾಯಸಕ್ಕೆ ಕೃಷ್ಣ ನಾಮ ಸಕ್ಕರೆ: ನಾಡಿನೆಲ್ಲೆಡೆ ಶ್ರೀರಾಮನವಮಿಯ ಸಡಗರ!

ಶ್ರೀ ರಾಮ ರಾಮ ರಾಮೇತಿ ರಮೇ ರಾಮೇ ಮನೋರಮೇ |
ಸಹಸ್ರನಾಮ ತತ್ತುಲ್ಯಂ ರಾಮನಾಮ ವರಾನನೇ ||

ಚೈತ್ರ ಮಾಸದ ಶುಕ್ಲ ಪಕ್ಷದ ಒಂಬತ್ತನೇ ದಿನ ಬಂತೆಂದರೆ ಸಾಕು, ಮಲೆನಾಡಿನಿಂದ ಹಿಡಿದು ಕರಾವಳಿಯವರೆಗೆ, ಹಳೆ ಮೈಸೂರಿನಿಂದ ಕಲ್ಯಾಣ ಕರ್ನಾಟಕದವರೆಗೆ ಎಲ್ಲೆಡೆ ‘ಶ್ರೀರಾಮ ಜಯ ರಾಮ’ ಎನ್ನುವ ನಾದ ಮೊಳಗುತ್ತದೆ. ಇದು ಕೇವಲ ಒಂದು ಹಬ್ಬವಲ್ಲ, ನಮ್ಮ ಸಂಸ್ಕೃತಿಯ ಅಸ್ಮಿತೆ.

ತ್ರೇತಾಯುಗದಲ್ಲಿ ಅಯೋಧ್ಯೆಯ ರಾಜ ದಶರಥ ಮತ್ತು ಕೌಸಲ್ಯೆಯ ಪುತ್ರನಾಗಿ, ಭಗವಾನ್ ವಿಷ್ಣುವಿನ ಏಳನೇ ಅವತಾರವಾಗಿ ಶ್ರೀರಾಮಚಂದ್ರ ಜನಿಸಿದ ಪುಣ್ಯದಿನವಿದು. ಅಧರ್ಮವನ್ನು ಅಳಿಸಿ, ಧರ್ಮವನ್ನು ಪ್ರತಿಷ್ಠಾಪಿಸಲು ಮನುಷ್ಯ ರೂಪದಲ್ಲಿ ದೇವರು ಭೂಮಿಗೆ ಬಂದ ಶುಭ ಘಳಿಗೆಯನ್ನು ನಾವು ನವಮಿಯಂದು ಸಂಭ್ರಮಿಸುತ್ತೇವೆ.

ತಂದೆಯ ಮಾತಿಗಾಗಿ ರಾಜ್ಯವನ್ನೇ ತ್ಯಜಿಸಿದ ರಾಮ, ನಮಗೆ ಶಿಸ್ತು ಮತ್ತು ಕರ್ತವ್ಯ ನಿಷ್ಠೆಯನ್ನು ಕಲಿಸುತ್ತಾನೆ. ‘ರಾಮರಾಜ್ಯ’ ಎನ್ನುವ ಪರಿಕಲ್ಪನೆ ಹುಟ್ಟಿದ್ದೇ ಇಲ್ಲಿಂದ.

ರಾಮನವಮಿ ಅಂದರೆ ನೆನಪಾಗುವುದೇ ಪಾನಕ ಮತ್ತು ಕೋಸಂಬರಿ. ಮಾರ್ಚ್-ಏಪ್ರಿಲ್ ತಿಂಗಳ ಉರಿಬಿಸಿಲಿನಲ್ಲಿ ದೇಹಕ್ಕೆ ತಂಪು ನೀಡಲು ಬೆಲ್ಲದ ಪಾನಕ ಮತ್ತು ಹೆಸರುಬೇಳೆ ಕೋಸಂಬರಿಯನ್ನು ಪ್ರಸಾದವಾಗಿ ಹಂಚುವುದು ನಮ್ಮ ಹಿರಿಯರು ಹಾಕಿಕೊಟ್ಟ ವೈಜ್ಞಾನಿಕ ಪದ್ದತಿ.

ರಾಮನವಮಿಯಂದು ಎಲ್ಲೆಡೆ ರಾಮ ಮಂದಿರಗಳಲ್ಲಿ ಭಜನೆ, ರಾಮಾಯಣ ಪಾರಾಯಣ ಮತ್ತು ಸಾರ್ವಜನಿಕವಾಗಿ ಪಾನಕ ವಿತರಣೆ ಮಾಡುವುದು ಈ ಹಬ್ಬದ ವಿಶೇಷ ಸೊಗಡು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !