ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಪ್ರದೇಶ ಸರ್ಕಾರ ರಾಜ್ಯದ ಜನತೆಗೆ ಸಿಹಿ ಸುದ್ದಿ ನೀಡಿದ್ದಾರೆ. ಪ್ರತಿ ಕುಟುಂಬದ ಕನಿಷ್ಠ ಒಬ್ಬರಿಗೆ ಉದ್ಯೋಗ ನೀಡಲಿದೆ ಎಂದು ಸಿಎಂ ಯೋಗಿ ಆದಿತ್ಯನಾಥ್ ಬುಧವಾರ ಹೇಳಿದ್ದಾರೆ. ಇದಕ್ಕಾಗಿ ಸರ್ಕಾರ ಕೌಶಲ್ಯ ಮ್ಯಾಪಿಂಗ್ ಪ್ರಯೋಗವನ್ನು ಪ್ರಾರಂಭಿಸಲಿದೆ. .
ಕೌಶಲ್ಯ ಮ್ಯಾಪಿಂಗ್ ಅವಧಿಯಲ್ಲಿ ಕನಿಷ್ಠ ಒಬ್ಬರೂ ಉದ್ಯೋಗದಲ್ಲಿಲ್ಲದ ಕುಟುಂಬಗಳ ಡೇಟಾವನ್ನು ತಯಾರಿಸಲಾಗುವುದು. ಅಂತಹ ಕುಟುಂಬಗಳ ಸದಸ್ಯರನ್ನು ವಿಶೇಷ ಕಾರ್ಯಕ್ರಮದಡಿ ಸಂಪರ್ಕಿಸಲಾಗುತ್ತದೆ. ಹಾಗೂ ಇದರಿಂದ ಕನಿಷ್ಠ ಕುಟುಂಬದ ಒಬ್ಬರು ಸದಸ್ಯರಿಗೆ ಉದ್ಯೋಗ ದೊರೆಯಲಿದೆ ಎಂದು ಗೋರಖ್ಪುರದಲ್ಲಿ ನಡೆದ ಉದ್ಯೋಗ ಮೇಳವೊಂದರಲ್ಲಿ ಉತ್ತರ ಪ್ರದೇಶ ಸಿಎಂ ಹೇಳಿದ್ದಾರೆ.
‘ಅವಶ್ಯಕತೆಗೆ ಅನುಗುಣವಾಗಿ, ಜನರಿಗೆ ತರಬೇತಿ ನೀಡಲಾಗುತ್ತದೆ ಮತ್ತು ಅವರಿಗೆ ಉದ್ಯೋಗ ಅಥವಾ ಸ್ವಯಂ ಉದ್ಯೋ ನೀಡಲಾಗುವುದು. ಇದರಿಂದ ಉತ್ತರ ಪ್ರದೇಶ ರಾಜ್ಯದ ಯಾವುದೇ ಕುಟುಂಬವು ಉದ್ಯೋಗದಿಂದ ವಂಚಿತವಾಗುವುದಿಲ್ಲ’ ಎಂದು ಅವರು ಹೇಳಿದರು.
ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಕೌಶಲ್ಯ ಭಾರತ ಹಾಗೂ ಸ್ಟಾರ್ಟಪ್ ಇಂಡಿಯಾನಂತಹ ಹಲವು ಕಾರ್ಯಕ್ರಮಗಳನ್ನು ಪ್ರಾರಂಭಿಸಿದೆ. ಈ ಮೂಲಕ ಕಾರ್ಮಿಕರ ಕೌಶಲ್ಯ ಮತ್ತು ಸಾಮರ್ಥ್ಯವನ್ನು ಗುರುತಿಸಲಾಗುವುದು ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಹೇಳಿದ್ದಾರೆ.
ಅಲ್ಲದೆ, ಕಳೆದ 5 ವರ್ಷಗಳಲ್ಲಿ ರಾಜ್ಯ ಸರ್ಕಾರ 5 ಲಕ್ಷ ಜನರಿಗೆ ಉದ್ಯೋಗ ನೀಡಿದೆ ಹಾಗೂ 60 ಲಕ್ಷ ಕುಶಲಕರ್ಮಿಗಳಿಗೆ ಸಾಲ ನೀಡಿದೆ . 2015 – 16 ರಲ್ಲಿ ರಾಜ್ಯ ಸರ್ಕಾರದ ನಿರುದ್ಯೋಗ ಪ್ರಮಾಣ ಶೇ. 18ಕ್ಕಿಂತ ಹೆಚ್ಚಿತ್ತು. ಈಗ ಆ ಪ್ರಮಾಣ ಶೇ. 16 ರಷ್ಟು ಕುಸಿದಿದ್ದು, ಉತ್ತರ ಪ್ರದೇಶದ ನಿರುದ್ಯೋಗ ಪ್ರಮಾಣ ಶೇ. 2.7 ರಷ್ಟಿದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಹೇಳಿಕೊಂಡಿದ್ದಾರೆ.
ಭಾರತವನ್ನು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿಸುವ ಪ್ರಧಾನಿ ಮೋದಿಯವರ ಇಚ್ಛೆಯಂತೆ ಉತ್ತರ ಪ್ರದೇಶ ಸಹ 1 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗುವತ್ತ ಹೆಜ್ಜೆ ಇಡಲಿದೆ. 2016 ರಲ್ಲಿ ಉತ್ತರ ಪ್ರದೇಶದ ಆರ್ಥಿಕತೆ ದೇಶದಲ್ಲಿ 6ನೇ ಸ್ಥಾನದಲ್ಲಿತ್ತು, ಈಗ ಎರಡನೇ ಸ್ಥಾನಕ್ಕೆ ಜಿಗಿದಿದೆ. ಕಳೆದ 5 ವರ್ಷಗಳಲ್ಲಿ ನಮ್ಮ ತಲಾ ಆದಾಯ ಮತ್ತು ಜಿಡಿಪಿ ದ್ವಿಗುಣಗೊಂಡಿದೆ. ಯುವಕರು, ಕುಶಲಕರ್ಮಿಗಳು ಮತ್ತು ಕಾರ್ಮಿಕರು ಸ್ವಾವಲಂಬನೆಯ ಹಾದಿಯಲ್ಲಿ ಸಾಗುತ್ತಿದ್ದಾರೆ ಎಂದೂ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.