ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್ ನಾಯಕರ ಹಾಗು ಶಶಿ ತರೂರ್ ನಡುವಿನ ಮುಸುಕಿನ ಗುದ್ದಾಟ ಬಹಿರಂಗವಾಗಿಯೇ ಗೋಚರವಾಗುತ್ತಿದ್ದು, ಸಾಮಾಜಿಕ ಜಾಲತಾಣದ ಪೋಸ್ಟ್ ಮೂಲಕ ಪರಸ್ಪರ ಕೆಸರೆರಚಾಟ ನಡೆಸುತ್ತಿದ್ದಾರೆ.
ನಿನ್ನೆ ಮಲ್ಲಿಕಾರ್ಜುನ ಖರ್ಗೆ “ನಮಗೆ ದೇಶ ಮೊದಲು, ಆದರೆ ಕೆಲವರಿಗೆ ಮೋದಿಯೇ ಮೊದಲು” ಎಂದು ಶಶಿ ತರೂರ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದರು. ಅದಕ್ಕೆ ಶಶಿ ತರೂರ್ ಸೋಷಿಯಲ್ ಮೀಡಿಯಾದಲ್ಲಿ “ರೆಕ್ಕೆ ನಿಮ್ಮದು, ಹಾರಲು ಯಾರ ಅನುಮತಿಯೂ ಬೇಕಾಗಿಲ್ಲ. ಆಕಾಶ ಯಾರದ್ದೂ ಅಲ್ಲ” ಎಂದು ಮಾರ್ಮಿಕ ಪೋಸ್ಟ್ ಮಾಡಿದ್ದರು. ಇದೀಗ ಅದಕ್ಕೆತಿರುಗೇಟು ನೀಡಿರುವ ಕಾಂಗ್ರೆಸ್ ಸಂಸದ ಮಾಣಿಕಮ್ ಟ್ಯಾಗೋರ್ ಶಶಿ ತರೂರ್ ಅವರ ನಿಗೂಢವಾದ ಪೋಸ್ಟ್ಗೆ ಪ್ರತಿಕ್ರಿಯಿಸಿದ್ದಾರೆ.
“ಹಾರಲು ಅನುಮತಿ ಕೇಳಬೇಡಿ. ಪಕ್ಷಿಗಳು ಮೇಲೇರಲು ಅನುಮತಿ ಅಗತ್ಯವಿಲ್ಲ ಎಂಬುದು ನಿಜ. ಆದರೆ ಇಂದಿನ ದಿನಗಳಲ್ಲಿ ಸ್ವತಂತ್ರ ಹಕ್ಕಿಯೂ ಆಕಾಶವನ್ನು ನೋಡಬೇಕು. ಏಕೆಂದರೆ, ಗಿಡುಗಗಳು, ರಣಹದ್ದುಗಳು ಮತ್ತು ‘ಹದ್ದುಗಳು’ ಯಾವಾಗಲೂ ಬೇಟೆಯಾಡುತ್ತಲೇ ಇರುತ್ತವೆ. ಸ್ವಾತಂತ್ರ್ಯವು ಎಲ್ಲರಿಗೂ ಮುಕ್ತವಲ್ಲ. ವಿಶೇಷವಾಗಿ ಪರಭಕ್ಷಕಗಳು ದೇಶಭಕ್ತಿಯನ್ನು ಗರಿಗಳಾಗಿ ಧರಿಸಿದಾಗ ಸ್ವಾತಂತ್ರ್ಯ ಮುಕ್ತವಲ್ಲ” ಎಂದು ಪೋಸ್ಟ್ ಮಾಡಿದ್ದಾರೆ.
ಈ ಪೋಸ್ಟ್ನಲ್ಲಿ 6 ಬೇಟೆಯ ಪಕ್ಷಿಗಳು, ಬಾಲ್ಡ್ ಈಗಲ್, ರೆಡ್-ಟೇಲ್ಡ್ ಹಾಕ್, ಆಸ್ಪ್ರೇ, ಅಮೇರಿಕನ್ ಕೆಸ್ಟ್ರೆಲ್, ಟರ್ಕಿ ರಣಹದ್ದು ಮತ್ತು ಗ್ರೇಟ್ ಹಾರ್ನ್ಡ್ ಗೂಬೆಯನ್ನು ತೋರಿಸಲಾಗಿದೆ. “ಪರಭಕ್ಷಕ” ಎಂಬ ಪದದ ಉಲ್ಲೇಖವು ಶಶಿ ತರೂರ್ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರಬಹುದೇ ಎಂಬ ಬಗ್ಗೆ ಊಹಾಪೋಹಗಳನ್ನು ಹುಟ್ಟುಹಾಕಿವೆ.