ಹೊಸದಿಗಂತ ಡಿಜಿಟಲ್ ಡೆಸ್ಕ್:
“ಸರ್ಕಾರಕ್ಕೆ ಎಷ್ಟೇ ಹೊರೆಯಾದರೂ ಪರವಾಗಿಲ್ಲ, ಜನರಿಗೆ ಕೊಟ್ಟ ಮಾತಿನಂತೆ ಐದು ವರ್ಷಗಳ ಕಾಲ ಗ್ಯಾರಂಟಿ ಯೋಜನೆಗಳನ್ನು ಮುಂದುವರಿಸಲೇಬೇಕು” ಎಂದು ಮಾಜಿ ಸಂಸದ ಡಿ.ಕೆ. ಸುರೇಶ್ ಖಡಕ್ ಆಗಿ ಹೇಳಿದ್ದಾರೆ.
ಇತ್ತೀಚೆಗಷ್ಟೇ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಕೆಲಸಗಳಿಗೆ ಹಣದ ಕೊರತೆಯಾಗುತ್ತಿದೆ ಎಂಬ ಧಾಟಿಯಲ್ಲಿ ಮಾತನಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಡಿ.ಕೆ. ಸುರೇಶ್, ಈ ಯೋಜನೆಗಳು ರಾಜ್ಯದ ಜನರಿಗೆ ನಾವು ನೀಡಿದ ಪವಿತ್ರ ವಾಗ್ದಾನ ಎಂದು ನೆನಪಿಸಿದರು.
“ಗ್ಯಾರಂಟಿ ಯೋಜನೆಗಳು ಹೊರೆಯಾಗುತ್ತವೆ ಎನ್ನುವುದಾದರೆ, ಚುನಾವಣಾ ಪೂರ್ವದಲ್ಲಿ ಈ ಬಗ್ಗೆ ಮೊದಲೇ ಯೋಚಿಸಬೇಕಿತ್ತು. ಒಮ್ಮೆ ಮಾತು ಕೊಟ್ಟ ಮೇಲೆ ಹಿಂದೆ ಸರಿಯುವುದು ಸರಿಯಲ್ಲ,” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಸರ್ಕಾರಕ್ಕೆ ಆರ್ಥಿಕವಾಗಿ ಎಷ್ಟೇ ಕಷ್ಟವಾದರೂ ಸರಿ, ಚುನಾವಣೆ ಎದುರಿಸಿದ ನಾಯಕರು ನೀಡಿದ ಭರವಸೆಯನ್ನು ಮುಂದಿನ ಐದು ವರ್ಷಗಳ ಕಾಲ ಈಡೇರಿಸಲೇಬೇಕು ಎಂದು ಒತ್ತಾಯಿಸಿದರು.
ಇದೇ ವೇಳೆ ಗ್ಯಾರಂಟಿ ದುರ್ಬಳಕೆಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಅವರು, “ಈ ಯೋಜನೆಗಳು ಇರುವುದು ಬಡವರು ಮತ್ತು ಜೀವನಕ್ಕಾಗಿ ಹೋರಾಟ ಮಾಡುವ ಅಸಹಾಯಕರ ಪರವಾಗಿ. ಆದರೆ ಶ್ರೀಮಂತರು ಇದನ್ನು ಪಡೆದುಕೊಳ್ಳುತ್ತಿರುವುದು ತಪ್ಪು,” ಎಂದು ಕಿವಿಮಾತು ಹೇಳಿದರು.



