ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯರು ಸರಸ್ವತಿ ಪೂಜೆ ಮಾಡುತ್ತಾರೆ, ಆದರೆ, ನಿಜವಾದ ಪ್ರತಿಭಾವಂತರು ವಿದೇಶಗಳಲ್ಲಿದ್ದಾರೆ. ನಮ್ಮಲ್ಲಿ ಲಕ್ಷ್ಮಿ ಪೂಜೆ ಮಾಡಿದರೂ ವಿದೇಶಿಗರೇ ಹೆಚ್ಚು ಶ್ರೀಮಂತರು ಎಂದು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಹೇಳಿದ್ದಾರೆ. ಈ ಮಾತು ವಿವಾದಕ್ಕೆ ಸಿಲುಕಿದೆ.
ಜಾರ್ಖಂಡ್ ವಿಧಾನಸಭೆಯ ಬಜೆಟ್ ಅಧಿವೇಶನದಲ್ಲಿ ಮಾತನಾಡಿ, ನಮ್ಮ ದೇಶದಲ್ಲಿ ಅತಿ ಹೆಚ್ಚು ಸರಸ್ವತಿ ಪೂಜೆ ನಡೆಯುತ್ತದೆ. ಆದರೆ, ನಿಜವಾದ ಬುದ್ಧಿವಂತ ಮಕ್ಕಳು ಜಪಾನ್ ಮತ್ತು ಇತರ ವಿದೇಶಗಳಲ್ಲಿ ಹುಟ್ಟುತ್ತಿದ್ದಾರೆ. ನಮ್ಮಲ್ಲಿ ಹೆಚ್ಚು ಲಕ್ಷ್ಮಿ ಪೂಜೆ ಮಾಡಲಾಗುತ್ತದೆ, ಆದರೆ, ಹಣ ಮತ್ತು ಸಮೃದ್ಧಿ ವಿದೇಶಗಳಲ್ಲೇ ಹೆಚ್ಚಿದೆ. ಇದನ್ನೆಲ್ಲ ನೋಡಿದರೆ ಎಲ್ಲೋ ಏನೋ ತಪ್ಪಿದೆ ಎಂದು ಅನ್ನಿಸುತ್ತದೆ ಎಂದು ಅಭಿಪ್ರಾಯಪಟ್ಟಿದ್ದರು.
ನಮ್ಮ ಜನರು ಕೇವಲ ಪೂಜೆಗಳಿಗೆ ಒತ್ತು ನೀಡುತ್ತಿದ್ದಾರೆ, ಆದರೆ, ಶಿಕ್ಷಣದ ಬಗ್ಗೆ ಸಾಕಷ್ಟು ಚರ್ಚೆ ಮಾಡುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ನಾವು ವಿಶ್ವಗುರು ಆಗುವುದು ಹೇಗೆ? ಎಂದೂ ಟೀಕಿಸಿದ್ದರು.
ಈ ಹೇಳಿಕೆಗೆ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದ್ದು, ಹಿಂದೂ ದೇವತೆಗಳಾದ ಸರಸ್ವತಿ ಮತ್ತು ಲಕ್ಷ್ಮಿಗೆ ಮಾಡಿದ ಅವಮಾನ ಎಂದು ಕಿಡಿಕಾರಿದೆ.



