ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಸಿಲಿನ ಅಬ್ಬರಕ್ಕೆ ತೆಲಂಗಾಣ ರಾಜ್ಯದ ಹಲವೆಡೆ ಜನರು ತತ್ತರಿಸಿ ಹೋಗಿದ್ದಾರೆ. ರಾಜ್ಯದಲ್ಲಿ ಏರುತ್ತಿರುವ ಬಿಸಿಲ ತಾಪಕ್ಕೆ ಕಳೆದ ಎರಡು ದಿನಗಳಲ್ಲಿ ಐದು ಮಂದಿ ಮೃತಪಟ್ಟಿರುವ ವರದಿಯಾಗಿದೆ. ಮೃತರಲ್ಲಿ ಒಂದೇ ಕುಟುಂಬದ ಇಬ್ಬರು ಸಹೋದರರು ಸೇರಿದ್ದಾರೆ.
ನಿಗುಲಾಪು ಶಂಕರ್, ನಿಗುಲಾಪು ರಾಜು,ಉದಿಗೆ ಐಲಮ್ಮ,ಚವಾಣ್ ಕೇಶವ್, ಪ್ರೇಮಲತಾ ಮೃತರು.
ನಿರ್ಮಲ್ ಜಿಲ್ಲೆಯ ಕುರನ್ನಪೇಟೆ ಗ್ರಾಮದಲ್ಲಿ ಸನ್ಸ್ಟ್ರೋಕ್ಗೆ ಕೆಲವೇ ಗಂಟೆಗಳಲ್ಲಿ ಇಬ್ಬರು ಸಹೋದರರು ಮೃತಪಟ್ಟ ವರದಿಯಾಗಿದೆ. ನಿಗುಲಾಪು ಶಂಕರ್ (48) ಮತ್ತು ನಿಗುಲಾಪು ರಾಜು (42) ಮೃತ ದುರ್ದೈವಿಗಳು. ಇಬ್ಬರು ಸಹೋದರರು ಕೆಲಸದ ನಿಮಿತ್ತ ಭಾನುವಾರ ಹೊರಗಡೆ ಹೋಗಿದ್ದರು. ಅಧಿಕ ಉಷ್ಣಾಂಶದಿಂದ ಸಂಜೆ ಮನೆಗೆ ಬರುತ್ತಿದ್ದಂತೆ ತೀವ್ರ ಅಸ್ವಸ್ಥರಾಗಿದ್ದ ಶಂಕರ್ ಎಂಬುವರನ್ನು ಮೊದಲು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಆಸ್ಪತ್ರೆಯಲ್ಲಿ ತಪಾಸಣೆ ನಡೆಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಇತ್ತ ಕಡೆ ಅಸ್ವಸ್ಥರಾಗಿದ್ದ ರಾಜು ಅವರನ್ನು ಸಹ ಸೋಮವಾರ ಬೆಳಗ್ಗೆ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅವರು ಕೂಡ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.
ಕರೀಂನಗರದಲ್ಲಿ ಭತ್ತ ಒಣಗಿಸುತ್ತಿದ್ದ ಮಹಿಳೆ ಸನ್ಸ್ಟ್ರೋಕ್ಗೆ ಕುಸಿದು ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಕರೀಂನಗರ ಜಿಲ್ಲೆಯ ಶಂಕರಪಟ್ಟಣಂ ಮಂಡಲದ ಗೊಲ್ಲಪಲ್ಲಿ ಗ್ರಾಮದಲ್ಲಿ, ಕೃಷಿ ಕಾರ್ಮಿಕರಾಗಿದ್ದ ಉದಿಗೆ ಐಲಮ್ಮ (59) ಭಾನುವಾರ ಬಿಸಿಲಿನಲ್ಲಿಯೇ ಭತ್ತ ಒಣಗಿಸುತ್ತಿದ್ದರು. ಈ ವೇಳೆ ಏಕಾಏಕಿ ಮೃತಪಟ್ಟಿದ್ದಾರೆ.
ಆದಿಲಾಬಾದ್ ಜಿಲ್ಲೆಯಲ್ಲೂ ಸನ್ಸ್ಟ್ರೋಕ್ಗೆ ಓರ್ವ ಬಲಿಯಾದ ವರದಿಯಾಗಿದೆ. ಚವಾಣ್ ಕೇಶವ್ (60) ಮೃತ ವ್ಯಕ್ತಿ. ನರ್ನೂರ್ ಮಂಡಲದ ಭೀಮಪುರ ಗ್ರಾಮದ ಕೇಶವ್, ಸೋಮವಾರ ಬಿಸಿಲಿನಲ್ಲಿ ಎಂದಿನಂತೆ ಕೆಲಸಕ್ಕೆ ತೆರಳಿದ್ದರು. ಆದರೆ, ಬಿಸಿಲ ತಾಪಕ್ಕೆ ಕೆಲಸವನ್ನು ಅರ್ಧಕ್ಕೆ ಬಿಟ್ಟು ಮನೆಗೆ ಮರಳಿದ್ದರು. ನೀರು ಕುಡಿದ ನಂತರ, ಅವರು ವಿಶ್ರಾಂತಿ ಪಡೆಯಲೆಂದು ಮಲಗಿದ್ದರು. ಆದರೆ, ಮಲಗಿದ ಸ್ವಲ್ಪ ಹೊತ್ತಿನಲ್ಲೇ ಇದ್ದಕ್ಕಿದ್ದಂತೆ ಅವರ ಉಸಿರು ನಿಂತಿದೆ.
ಸನ್ಸ್ಟ್ರೋಕ್ಗೆ ಮಹಾಬುಬಾಬಾದ್ನಲ್ಲಿ ಭತ್ತ ಮಾರಾಟಗಾರೊಬ್ಬರು ಮೃತಪಟ್ಟ ವರದಿಯಾಗಿದೆ. ಹನುಮಂದ್ಲ ಪ್ರೇಮಲತಾ (62) ಮೃತರು. ಮಹಬುಬಾಬಾದ್ ಜಿಲ್ಲೆಯ ತೋರೂರು ಮಂಡಲದ ಚೆರ್ಲಪಲೆಂ ಗ್ರಾಮದ ಪ್ರೇಮಲತಾ ತಮ್ಮ ಪತಿ ವೆಂಕಟರಮಣರಸಿಂಹ ರೆಡ್ಡಿ ಅವರೊಂದಿಗೆ ಕೊಯ್ಲು ಮಾಡಿದ ಭತ್ತವನ್ನು ಮಾರಾಟ ಮಾಡಲೆಂದು ಭತ್ತ ಖರೀದಿ ಕೇಂದ್ರಕ್ಕೆ ಭೇಟಿ ನೀಡುತ್ತಿದ್ದರು. ಸೋಮವಾರ ಮಧ್ಯಾಹ್ನ, ತೀವ್ರ ಬಿಸಿಲ ತಾಪದಿಂದ ಅವರು ಭತ್ತದ ರಾಶಿಯ ಬಳಿ ಕುಸಿದು ಬಿದ್ದಿದ್ದರು.