ಹೊಸ ದಿಗಂತ ವರದಿ, ಬೀದರ:
ಇತ್ತೀಚಿಗೆ ದೇಶದ್ರೋಹಿ ಸಂಘಟನೆಗಳಾದ ಪಿ.ಎಫ್.ಐ. ಮತ್ತು ಎಸ್.ಡಿ.ಪಿ.ಐ ಕೊಲೆಪಾಕರಿಂದ ಕರ್ನಾಟಕ ರಾಜ್ಯದ ಶಿವಮೊಗ್ಗ ನಗರದಲ್ಲಿ ಬರ್ಬರ ಹತ್ಯೆಗೊಳಾದ ಶಿವಮೊಗ್ಗ ನಗರ ಕೋಟೆ ಪ್ರಖಂಡದ ಬಜರಂಗ ದಳದ ಸಹ ಸಂಯೋಜಕ ಹರ್ಷ ಅವರ ಹತ್ಯೆಯನ್ನು ಖಂಡಿಸಿ, ಬೀದರ ನಗರದಲ್ಲಿ ವಿಶ್ವ ಹಿಂದು ಪರಿಷತ್ ಮತ್ತು ಬಜರಂಗ ದಳ ಸೇರಿದಂತೆ ಬೀದರ ಜಿಲ್ಲೆಯ ಹಿಂದುಪರ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸಿ, ಬೀದರ ಜಿಲ್ಲಾಧಿಕಾರಿಗಳ ಮೂಲಕ ಗೃಹಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಬೀದರ ಜಿಲ್ಲೆಯ ಹಿಂದುಪರ ಸಂಘಟನೆಯ ಹಿರಯ ಮುಖಂಡರಾದ ರಾಮಕೃಷ್ಣ ಸಾಳೆ ಅವರು ಮಾತನಾಡುತ್ತ, ಶಿವಮೊಗ್ಗದ ಹರ್ಷ ಒಬ್ಬ ಸತ್ತಿಲ್ಲ. ಇದು ಕರ್ನಾಟಕದ ಪ್ರತಿಯೊಂದು ಮನೆಯ ಮಗ ಹರ್ಷ ಸತ್ತಿದ್ದಾನೆ. ಈ ಸಾವಿಗೆ ನ್ಯಾಯ ಸಿಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೀದರ ಜಿಲ್ಲೆಯ ಹಿಂದುಪರ ಸಂಘಟನೆಯ ಇನ್ನೋರ್ವ ಹಿರಯ ಮುಖಂಡರಾದ ರೇವಣಸಿದ್ದಪ್ಪ ಜಲಾದೆ ಅವರು ಮಾತನಾಡುತ್ತ, ರಾಜ್ಯದ ಶಿವಮೊಗ್ಗದಲ್ಲಿ ಹಿಂದುಪರ ಸಂಘಟನೆಯ ಯುವಕ ಹರ್ಷನನ್ನು ಕಗ್ಗೊಲೆ ಮಾಡಿರುವುದು ಖಂಡನೀಯವಾಗಿದೆ ಎಂದು ಹೇಳಿದರು.
ಬೀದರ ನಗರಸಭೆ ಸದಸ್ಯರಾದ ಶಶಿ ಹೊಸಳ್ಳಿ ಅವರು ಮಾತನಾಡುತ್ತ, ರಾಜ್ಯದ ಶಿವಮೊಗ್ಗದಲ್ಲಿ ಹಿಂದುಪರ ಸಂಘಟನೆಯ ಯುವ ನಾಯಕನನ್ನು ಕೊಲೆ ಮಾಡಿರುವ ಖದೀಮರ ಮಟ್ಟ ಅಡಗಿಸುವುದು ಬಹಳ ಮುಖ್ಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಬೀದರ ಜಿಲ್ಲೆಯ ಹಿಂದುಪರ ಸಂಘಟನೆಯ ಪದಾಧಿಕಾರಿಗಳು, ಕಾರ್ಯಕರ್ತರು, ಬೀದರ ಜಿಲ್ಲೆಯ ಭಾವಸಾರ ಕ್ಷತ್ರೀಯ ಸಮಾಜದ ರಾಮ ಅಂಬುರೆಮ ಪಾಂಡುರಂಗ, ಸತ್ಯಪ್ರಕಾಶ ಅವರು ಸೇರಿದಂತೆ ಇತರರು ಇದ್ದರು.