ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಮ್ಮು ಮತ್ತು ಕಾಶ್ಮೀರದಲ್ಲಿ ಯಾವುದೇ ಭಯೋತ್ಪಾದಕರ ಹಾಗೂ ಕಲ್ಲು ತೂರಾಟಗಾರರ ಕುಟುಂಬಕ್ಕೆ ಅಥವಾ ಅವರ ನಿಕಟವರ್ತಿಗಳಿಗೆ ಸರ್ಕಾರಿ ಉದ್ಯೋಗ ಸಿಗುವುದಿಲ್ಲ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ಹೇಳಿದ್ದಾರೆ.
ನರೇಂದ್ರ ಮೋದಿ ಸರ್ಕಾರವು ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕರನ್ನು ಹಾಗೂ ಅಂತಹ ಪರಿಸರವನ್ನು ನಿರ್ಮೂಲನೆ ಮಾಡಿದೆ. ಇದರ ಪರಿಣಾಮವಾಗಿ ದೇಶದಲ್ಲಿ ಭಯೋತ್ಪಾದಕ ಘಟನೆ ಕಡಿಮೆಯಾಗಿದೆ ಎಂದು ಹೇಳಿದರು.
ಸಂದರ್ಶನವೊಂದರಲ್ಲಿ ಈ ಕುರಿತು ಹೇಳಿದ ಅವರು, ಕಾಶ್ಮೀರದಲ್ಲಿ, ಯಾರಾದರೂ ಭಯೋತ್ಪಾದಕ ಸಂಘಟನೆಗೆ ಸೇರಿದರೆ, ಅವರ ಕುಟುಂಬದ ಸದಸ್ಯರಿಗೆ ಯಾವುದೇ ಸರ್ಕಾರಿ ಉದ್ಯೋಗ ನೀಡುವುದಿಲ್ಲ ಎಂಬ ನಿರ್ಧಾರವನ್ನು ನಾವು ತೆಗೆದುಕೊಂಡಿದ್ದೇವೆ ಇದರ ಜತೆಗೆ ಯಾರಾದರೂ ಕಲ್ಲು ತೂರಾಟದಲ್ಲಿ ತೊಡಗಿದರೆ ಅವರ ಕುಟುಂಬದ ಸದಸ್ಯರಿಗೂ ಸರ್ಕಾರಿ ಕೆಲಸ ಸಿಗುವುದಿಲ್ಲ ಎಂದು ಹೇಳಿದ್ದಾರೆ.
ನಮ್ಮ ಈ ನಿರ್ಧಾರದ ವಿರುದ್ಧ ಕೆಲವೊಂದು ಬುದ್ಧಿಜೀವಿಗಳು ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದರು. ಕೊನೆಗೆ ಸುಪ್ರೀಂನಲ್ಲೂ ಸರ್ಕಾರದ ನಿರ್ಧಾರವೇ ಮೇಲುಗೈ ಸಾಧಿಸಿತು. ಇನ್ನು ಭಯೋತ್ಪಾಕದ ಕುಟುಂಬದವರ ತನ್ನ ಹತ್ತಿರದ ಸಂಬಂಧಿಗಳು ಅಧಿಕಾರಿಗಳ ಮುಂದೆ ಬಂದು ನಮ್ಮ ಕುಟುಂಬದ ಈ ವ್ಯಕ್ತಿ ಭಯೋತ್ಪಾದಕ ಸಂಘಟನೆಯಲ್ಲಿ ತೋಡಗಿಸಿಕೊಂಡಿದರೆ ಎಂದು ಹೇಳಿದರೆ ಅವರಿಗೆ ವಿನಾಯಿತಿ ನೀಡಿಲಾಗುವುದು ಎಂದು ಹೇಳಿದ್ದಾರೆ.
ಜಮ್ಮು ಕಾಶ್ಮೀರದಲ್ಲಿ ನಮ್ಮ ಸೇನೆ ಮತ್ತು ಅಧಿಕಾರಿಗಳು ಸರಿಯಾದ ಕ್ರಮವನ್ನು ತೆಗೆದುಕೊಳ್ಳುತ್ತಿದ್ದಾರೆ. ಹಾಗಾಗಿ ಅಲ್ಲಿ ಭಯೋತ್ಪಾದನೆ ಕಡಿಮೆಯಾಗಿದೆ. ಎಲ್ಲರೂ ನಿರ್ಭೀತವಾಗಿ ಹಾಗೂ ಸಂತೋಷದಿಂದ ಜೀವನ ನಡೆಸುತ್ತಿದ್ದಾರೆ ಎಂದು ಹೇಳಿದರು.
ಈ ಹಿಂದೆ ಭಯೋತ್ಪಾದಕರು ಹತ್ಯೆಯಾದರೆ ಅವರನ್ನು ಕಾಶ್ಮೀರದಲ್ಲಿ ಮೆರವಣಿಗೆ ಮಾಡಲಾಗುತ್ತಿತ್ತು. ಈ ಎಲ್ಲ ಪ್ರವೃತ್ತಿಯನ್ನು ನಿಲ್ಲಿಸಿದ್ದೇವೆ. ಭಯೋತ್ಪಾದಕನನ್ನು ಎಲ್ಲಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ಸಮಾಧಿ ಮಾಡಲಾಗಿದೆ. ಆದರೆ ಅವರನ್ನು ಪ್ರತ್ಯೇಕ ಸ್ಥಳದಲ್ಲಿ ನಾವು ಸಮಾಧಿ ಮಾಡುತ್ತಿದ್ದೇವೆ ಎಂದರು.
ಕಾಶ್ಮೀರದಲ್ಲಿ ಒಬ್ಬ ಭಯೋತ್ಪಾದಕನನ್ನು ನಮ್ಮ ಭದ್ರತಾ ಪಡೆಗಳು ಸುತ್ತುವರೆದಾಗ, ಮೊದಲು ಶರಣಾಗಲು ಅವಕಾಶ ನೀಡಲಾಗುತ್ತದೆ. ಹಾಗೂ ನಾವು ಅವನ ತಾಯಿ ಅಥವಾ ಹೆಂಡತಿ, ಕುಟುಂಬ ಸದಸ್ಯರನ್ನು ಕರೆದು ಭಯೋತ್ಪಾದಕನಿಗೆ ಶರಣಾಗುವಂತೆ ಮನವಿ ಮಾಡುವಂತೆ ಕೇಳಿಕೊಳ್ಳುತ್ತೇವೆ. ಒಂದು ವೇಳೆ ಅವನು (ಭಯೋತ್ಪಾದಕ) ಅದಕ್ಕೆ ಒಪ್ಪದಿದ್ದರೆ ಅವನು ಸಾಯುತ್ತಾನೆ ಎಂದು ಹೇಳಿದರು.
ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ಘಟನೆಗಳು ಗಮನಾರ್ಹವಾಗಿ ಕಡಿಮೆಯಾಗಿದೆ. ಹಾಗೂ ಎನ್ಐಎ (ರಾಷ್ಟ್ರೀಯ ತನಿಖಾ ಸಂಸ್ಥೆ) ಮೂಲಕ ನಾವು ಭಯೋತ್ಪಾದಕ ನಿಧಿಯ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದೇವೆ. ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಸಂದರ್ಭದಲ್ಲಿ, ಸರ್ಕಾರವು ಭಯೋತ್ಪಾದಕ ಸಿದ್ಧಾಂತದ ಪ್ರಕಟಣೆ ಮತ್ತು ಅದರ ಪ್ರಚಾರ ಮಾಡುವುದನ್ನು ತಡೆಯಲಾಗಿತ್ತು. ಹೀಗೆ ಅನೇಕ ಕ್ರಮಗಳನ್ನು ನಮ್ಮ ಸರ್ಕಾರ ತೆಗೆದುಕೊಂಡಿದೆ ಎಂದರು.