ಹೊಸದಿಗಂತ ವರದಿ,ಹಾವೇರಿ:
ಗ್ಯಾರೇಜಿನಲ್ಲಿ ಕೆಲಸ ಮಾಡುತ್ತಿದ್ದ ಯುವಕನ ಮೇಲೆ ದುಷ್ಕರ್ಮಿಗಳು ಮಚ್ಚಿನಿಂದ ಕೊಚ್ಚಿ ಕೊಲೆಗೆ ಯತ್ನಿಸಿ ಪರಾರಿಯಾದ ಘಟನೆ ಹಾವೇರಿ ಜಿಲ್ಲಾ ಸವಣೂರು ಪಟ್ಟಣದ ಗೋಕಾಕ್ ಸರ್ಕಲ್ ಬಳಿ ಗುರುವಾರ ನಡೆದಿದೆ.
ರೌಡಿಶೀಟರ್ ಆಬಿದ್ ಅಲ್ಲಾಬಕಷ ಚೌದ್ರಿ (30) ಎಂಬಾತನೇ ದುಷ್ಕರ್ಮಿಗಳ ಮಚ್ಚಿನೇಟಿಗೆ ಸಿಲುಕಿದವನು.
ಎರಡು ಬೈಕ್ ಗಳಲ್ಲಿ ಬಂದ ದುಷ್ಕರ್ಮಿಗಳು ಏಕಾಏಕಿ ಆತನ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ.
ಇದನ್ನು ಕಂಡ ಸ್ಥಳೀಯರು ಹಾಗೂ ಸ್ನೇಹಿತರು ಸವಣೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಿದ್ದಾರೆ. ತಲೆಗೆ ಕೈಗೆ ಹಾಗೂ ದೇಹದ ಇತರೆ ಭಾಗಗಳಿಗೆ ಮಚ್ಚಿನಿಂದ ಬೀಸಿದ ಹಿನ್ನೆಲೆಯಲ್ಲಿ ಅಬಿದ್ ಚೌದ್ರಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದು ಆತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.