ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿದೇಶ ದೇಣಿಗೆ (ನಿಯಂತ್ರಣ) ತಿದ್ದುಪಡಿ ಮಸೂದೆ (ಎಫ್ಸಿಆರ್ಎ)ಯು ವಿದೇಶದಿಂದ ಪಡೆಯುವ ಹಣವನ್ನು ದುರುಪಯೋಗ ಪಡಿಸುವುದನ್ನು ಮಾತ್ರವೇ ಉದ್ದೇಶಿಸಲಾಗಿದೆ. ವಿದೇಶದಿಂದ ದೇಣಿಗೆ ಪಡೆದಲ್ಲಿ ಎಫ್ಸಿಆರ್ಎ ರದ್ದಾಗದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್ ಸ್ಪಷ್ಟಪಡಿಸಿದ್ದಾರೆ.
ಎಫ್ಸಿಆರ್ಎ ಕ್ರೈಸ್ತ ವಿಭಾಗದವರ ಮೇಲೆ ಪ್ರತಿಕೂಲಕರ ಪರಿಣಾಮ ಬೀರಲಿದೆ ಎಂಬ ರೀತಿಯಲ್ಲಿ ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಪ್ರಚಾರ ನಡೆಸುತ್ತಿವೆ. ಎಫ್ಐಆರ್ಎ ಮೂಲಕ ಕೇವಲ ಒಂದು ಸಮುದಾಯ ಮಾತ್ರವಲ್ಲ ಹಿಂದು, ಕ್ರೈಸ್ತ , ಮುಸ್ಲಿಂ ಸಂಘಟನೆಗಳೂ ವಿದೇಶಗಳಿಂದ ದೇಣಿಗೆ ರೂಪದಲ್ಲಿ ಹಣ ಪಡೆಯುತ್ತಿವೆ. ಹೀಗೆ ಎಫ್ಸಿಆರ್ಎ ಮರೆಯಲ್ಲಿ ಕಾಳಧನವನ್ನು ಬಿಳುಪುಗೊಳಿಸುವ ಯತ್ನಗಳನ್ನು ಕೆಲವರು ನಡೆಸುತ್ತಿದ್ದಾರೆ. ಅದನ್ನು ತಡೆಯುವ ಉದ್ದೇಶದಿಂದ ಮಾತ್ರವೇ ಎಫ್ಸಿಆರ್ಎ ಕಾನೂನು ತಿದ್ದುಪಡಿ ಮಸೂದೆ ತರಲು ಕೇಂದ್ರ ಸರಕಾರ ಉದ್ದೇಶಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರು ಸ್ಪಷ್ಟಪಡಿಸಿದ್ದಾರೆ.
ವಿದೇಶದಿಂದ ಭಾರತಕ್ಕೆ ಪ್ರವಹಿಸುವ ಹಣದ ಮೂಲವನ್ನು ಪತ್ತೆಹಚ್ಚಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಎಫ್ಸಿಆರ್ಎ ಪ್ರಕಾರ ವಿದೇಶದಿಂದ ದೇಣಿಗೆ ಪಡೆದು ಅದನ್ನು ಕಾನೂನು ಪ್ರಕಾರ ಉಪಯೋಗಿಸದಿದ್ದಲ್ಲಿ ಅಂತಹ ಎಫ್ಸಿಆರ್ಎ ರದ್ದಾಗಲಿದೆ. ಹೀಗೆ ರದ್ದಾದಲ್ಲಿ ಅಂತಹ ಎಫ್ಸಿಆರ್ಎ ಮೂಲಕ ಲಭಿಸಿದ ಹಣದಿಂದ ಸಂಪಾದಿಸಿದ ಆಸ್ತಿಗಳು ಹಾಗೂ ಕಾಳಧನ ತಡೆ ಕಾನೂನಿನ ವ್ಯಾಪ್ತಿಯೊಳಗೆ ಬರಲಿದೆ. ಕಾಳಧನವನ್ನು ಬಿಳುಪುಗೊಳಿಸುವಿಕೆ ಮತ್ತು ಭಯೋತ್ಪಾದನೆ ಪರಸ್ಪರ ನಂಟು ಹೊಂದಿದೆ. ಅದನ್ನು ತಡೆಗಟ್ಟುವುದು ತಿದ್ದುಪಡಿ ಕಾನೂನಿನ ಪ್ರಧಾನ ಉದ್ದೇಶವಾಗಿದೆ. ಎಫ್ಸಿಆರ್ಎ ಮೂಲಕ ದೇವಸ್ಥಾನಗಳು, ಮಸೀದಿಗಳು ಹಾಗೂ ಕ್ರೈಸ್ತ ಸಂಘಟನೆಗಳೂ ವಿದೇಶಗಳಿಂದ ದೇಣಿಗೆ ರೂಪದಲ್ಲಿ ಹಣ ಪಡೆಯುತ್ತಿವೆ. ಹೀಗೆ ಪಡೆಯುವ ಹಣವನ್ನು ಅವುಗಳು ಕಾನೂನು ಪರವಾಗಿಯೇ ಉಪಯೋಗಿಸಲಾಗುತ್ತಿದೆ. ಇದೆಲ್ಲವನ್ನು ತಿಳಿದಿದ್ದರೂ ಕಾಂಗ್ರೆಸ್ಸಿಗರು ಎಫ್ಸಿಆರ್ಎ ವಿಷಯದಲ್ಲಿ ಜನರಲ್ಲಿ ತಪ್ಪು ಭಾವನೆ ಮೂಡಿಸುತ್ತಿದ್ದಾರೆಂದು ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.



