ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ನಡೆಸಿದ ಆಪರೇಷನ್ ಸಿಂಧೂರ ಸೇನಾ ಕಾರ್ಯಾಚರಣೆ ಬಳಿಕ ಭಾರತದ ವಿರುದ್ಧ ಪ್ರತೀಕಾರಕ್ಕೆ ಹವಣಿಸುತ್ತಿರುವ ಪಾಕಿಸ್ತಾನ ಭಾರತದಲ್ಲಿರುವ ಧಾರ್ಮಿಕ ಕ್ಷೇತ್ರಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡುವ ಹುನ್ನಾರ ನಡೆಸಿದೆ. ಅದರಲ್ಲಿಯೂ ಗೋಲ್ಡನ್ ಟೆಂಪಲ್ ಮೇಲೆ ಹೆಚ್ಚಿನ ನಿಗಾ ಇರಿಸಲಾಗಿದೆ.
ಇದಕ್ಕೆ ಇಂಬು ನೀಡುವಂತೆ ಇತ್ತೀಚೆಗೆ ಸಿಖ್ಖರ ಪವಿತ್ರ ಕ್ಷೇತ್ರ ಗೋಲ್ಡನ್ ಟೆಂಪಲ್ ಮೇಲೆ ಪಾಕಿಸ್ತಾನ ದಾಳಿ ಯತ್ನಿಸಿದ್ದ ಘಟನೆ ಬೆಳಕಿಗೆ ಬಂದಿದೆ. ಪಾಕಿಸ್ತಾನದ ಕ್ಷಿಪಣಿಗಳು ಮತ್ತು ಡ್ರೋನ್ ಗಳು ಗೋಲ್ಡನ್ ಟೆಂಪಲ್ ಅನ್ನು ಗುರಿಯಾಗಿಸಿಕೊಂಡು ದಾಳಿಗೆ ಬಂದಿದ್ದವು. ಆದರೆ ಭಾರತದ ಆಕಾಶ್ ಕ್ಷಿಪಣಿ ಮತ್ತು ಇತರೆ ಏರ್ ಡಿಫೆನ್ಸ್ ವ್ಯವಸ್ಥೆ ಅವುಗಳನ್ನು ಆಗಸದಲ್ಲೇ ಹೊಡೆದುರುಳಿಸಿವೆ.
ಇದೀಗ ಭಾರತದ ಧಾರ್ಮಿಕ ಕ್ಷೇತ್ರಗಳ ಮೇಲೆ ದಾಳಿ ಮಾಡಿ ಭಾರತದಲ್ಲಿ ಧಾರ್ಮಿಕ ಶಾಂತಿ ಕದಡುವ ಪಾಕಿಸ್ತಾನದ ಯೋಜನೆ ಬಹಿರಂಗವಾಗುತ್ತಲೇ ಭಾರತ ಸರ್ಕಾರ ಗಡಿಗೆ ಸಮೀಪವಿರುವ ಧಾರ್ಮಿಕ ಕ್ಷೇತ್ರಗಳಿಗೆ ಬಿಗಿ ಭದ್ರತೆ ಒದಗಿಸಿದೆ. ಅಂತೆಯೇ ಸಂಭಾವ್ಯ ವಾಯುದಾಳಿ ತಡೆಗೂ ಕ್ರಮ ಕೈಗೊಂಡಿದೆ.
ಇದರ ಮೊದಲ ಹಂತವಾಗಿ ಗೋಲ್ಡನ್ ಟೆಂಪಲ್ ಗೆ air defence guns ಅಳವಡಿಸಲು ಮುಂದಾಗಿದೆ. ಇದಕ್ಕಾಗಿ ದೇಗುಲದ ಆಡಳಿತ ಮಂಡಳಿ ಕೂಡ ಅನುಮತಿ ನೀಡಿದ್ದು, ಪಾಕಿಸ್ತಾನದಿಂದ ಬರುವ ಸಂಭಾವ್ಯ ಡ್ರೋನ್ ಮತ್ತು ಕ್ಷಿಪಣಿ ಬೆದರಿಕೆಗಳನ್ನು ಎದುರಿಸಲು ಭಾರತೀಯ ಸೇನೆಗೆ ದೇವಾಲಯದೊಳಗೆ ವಾಯು ರಕ್ಷಣಾ ಬಂದೂಕುಗಳನ್ನು ನಿಯೋಜಿಸಲು ಗೋಲ್ಡನ್ ಟೆಂಪಲ್ ಆಡಳಿತ ಮಂಡಳಿಯು ಅವಕಾಶ ನೀಡಿದೆ.