ಹೊಸದಿಗಂತ ಡಿಜಿಟಲ್ ಡೆಸ್ಕ್:
ಇನ್ನುಮುಂದೆ ಬೀದಿಗಳಿದು ಪ್ರತಿಭಟನೆ ಮಾಡುವುದಿಲ್ಲ, ಇನ್ನೇನಿದ್ರೂ ನ್ಯಾಯಾಲಯದಲ್ಲೇ ನಮ್ಮ ಹೋರಾಟ ಮುಂದುವರೆಸುತ್ತೇವೆ ಎಂದು ಕುಸ್ತಿಪಟುಗಳು ಹೇಳಿದ್ದಾರೆ.
ಭಾರತೀಯ ಕುಸ್ತಿ ಫೆಡರೇಷನ್ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಮಹಿಳಾ ಕುಸ್ತಿಪಟುಗಳು ಲೈಂಗಿಕ ಕಿರುಕುಳ ಆರೋಪ ಮಾಡಿದ್ದು, ತಮಗೆ ನ್ಯಾಯ ಕೊಡಿಸಿ ಎಂದು ಒತ್ತಾಯಿಸಿ ಒಂದು ತಿಂಗಳುಗಳ ಕಾಲ ದೆಹಲಿಯಲ್ಲಿ ಪ್ರತಿಭಟನೆ ನಡೆಸಿದ್ದರು. ಈ ಕುರಿತು ಅಮಿತ್ ಶಾ ಅವರೊಂದಿಗೆ ಎರಡು ಸಭೆಗಳನ್ನು ನಡೆಸಿದ್ದು, ಅದು ಕೂಡ ವಿಫಲವಾಗಿತ್ತು. ಸಚಿವ ಅನುರಾಗ್ ಠಾಕೂರ್ ಅವರ ಜತೆಯೂ ಸಭೆ ನಡೆಸಿದ್ದರು.
ಇದೀಗ ತಮ್ಮ ಪ್ರತಿಭಟನೆಯನ್ನು ನ್ಯಾಯಾಲಯದಲ್ಲಿ ಮಾಡುವುದಾಗಿ ವಿನೇಶ್ ಫೋಗಟ್, ಸಾಕ್ಷಿ ಮಲಿಕ್ ಮತ್ತು ಬಜರಂಗ್ ಪುನಿಯಾ ಒಂದೇ ರೀತಿಯ ಟ್ವೀಟ್ಗಳನ್ನು ಮಾಡಿದ್ದು, “ಈ ಪ್ರಕರಣದಲ್ಲಿ ನಮಗೆ ನ್ಯಾಯ ಸಿಗುವವರೆಗೂ ಕುಸ್ತಿಪಟುಗಳ ಪ್ರತಿಭಟನೆ ಮುಂದುವರೆಯುತ್ತದೆ ಆದರೆ ಹೋರಾಟ ರಸ್ತೆಯಲ್ಲಲ್ಲ, ನ್ಯಾಯಾಲಯದಲ್ಲಿ” ಎಂದು ಹೇಳಿದ್ದಾರೆ.
ಸರ್ಕಾರ ಭಾರತೀಯ ಕುಸ್ತಿ ಒಕ್ಕೂಟದಲ್ಲಿ ಬದಲಾವಣೆ ಮಾಡಲು ಮುಂದಾಗಿದೆ, ಸರ್ಕಾರ ನೀಡಿದ ಭರವಸೆಯಂತೆ ಪ್ರಕ್ರಿಯೆ ಆರಂಭಗೊಂಡಿದೆ. ಜುಲೈ 11ರಂದು ಚುನಾವಣೆ ನಡೆಯಲಿದೆ ಎಂದು ಟ್ವೀಟ್ನಲ್ಲಿ ತಿಳಿಸಿದ್ದಾರೆ. ಈ ಟ್ವೀಟ್ ಮಾಡಿದ ಕೆಲವೇ ಕ್ಷಣಗಳಲ್ಲಿ ವಿನೇಶ್ ಫೋಘಟ್ ಮತ್ತು ಸಾಕ್ಷಿ ಮಲ್ಲಿಕ್, ನಾವು ಸಾಮಾಜಿಕ ಜಾಲತಾಣಗಳಿಂದ ಕೆಲವು ದಿನಗಳ ಕಾಲ ವಿರಾಮ ತೆಗೆದುಕೊಳ್ಳುತ್ತಿದ್ದೇವೆ ಎಂದು ಟ್ವೀಟ್ ಮಾಡಿದ್ದಾರೆ.