ಹೊಸದಿಗಂತ ಡಿಜಿಟಲ್ ಡೆಸ್ಕ್:
ಸರ್ಕಾರಿ ಅಧಿಕಾರಿಯೊಬ್ಬರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಸಿಎಂ ಬಸವರಾಜ ಬೊಮ್ಮಾಯಿ ಅವರ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಕುಂಕುವ್ ವೃತ್ತದ ಗ್ರಾಮ ಲೆಕ್ಕಾಧಿಕಾರಿ ಎಂ.ಎಸ್. ಪ್ರಶಾಂತ್ ಕುಮಾರ್ ಅವರ ದೂರಿನ ಆಧಾರದ ಮೇಲೆ ನ್ಯಾಮತಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಅಕ್ಟೋಬರ್ ೩೦ರಂದು ಪ್ರಶಾಂತ್ ಕುಮಾರ್ ದೂರು ದಾಖಲಿಸಿದ್ದು, ಕೆಲವೇ ದಿನದಲ್ಲಿ ಅವರನ್ನು ಚನ್ನಗಿರಿ ವೃತ್ತದ ನಲ್ಲೂರಿಗೆ ವರ್ಗಾವಣೆ ಮಾಡಲಾಗಿದೆ ಎನ್ನಲಾಗಿದೆ.
ನ್ಯಾಮತಿ ತಾಲೂಕಿನಲ್ಲಿ ಮಳೆಯಿಂದ ಹಾನಿಗೊಳಗಾದ ಬಗ್ಗೆ ವರದಿ ನೀಡುವಂತೆ ಕುಮಾರ್ಗೆ ರೇಣುಕಾಚಾರ್ಯ ಹೇಳಿದ್ದಾರೆ. ವರದಿ ನಂತರ ತಮ್ಮ ಹತ್ತಿರದ ಜನರಿಗೆ ರೇಣುಕಾಚಾರ್ಯ ಸಹಾಯ ಮಾಡಲು ಮುಂದಾಗಿದ್ದು, ಕುಮಾರ್ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಕೋಗನಹಳ್ಳಿ ಗ್ರಾಮದಲ್ಲಿ ದನದ ಕೊಟ್ಟಿಗೆ ಹಾನಿ ಬಗ್ಗೆ ಕುಮಾರ್ ವರದಿ ನೀಡಿದ್ದಾರೆ. ಇದನ್ನು ಮನೆ ಹಾನಿ ಎಂದು ಬದಲಾಯಿಸುವಂತೆ ರೇಣುಕಾಚಾರ್ಯ ಹೇಳಿದ್ದಾರೆ. ಅದಕ್ಕೆ ಕುಮಾರ್ ಒಪ್ಪಿಗೆ ನೀಡಿಲ್ಲ. ತದನಂತರ ಕುಮಾರ್ರನ್ನು ಮನೆಗೆ ಕರೆಸಿ ಮತ್ತೆ ವರದಿ ಹೊಸತಾಗಿ ಬರೆಯಲು ಸೂಚಿಸಿದ್ದಾರೆ. ಆದರೆ ಕುಮಾರ್ ಇದನ್ನು ನಿರಾಕರಿಸಿದ್ದಾರೆ ಎನ್ನಲಾಗಿದೆ.