ಮೈಸೂರು-ಕುಶಾಲನಗರ ರೈಲು ಮಾರ್ಗದ ಅಂತಿಮ ಯೋಜನಾ ವರದಿ ಸಿದ್ಧ: ಸಂಸದ ಪ್ರತಾಪ್ ಸಿಂಹ

ಹೊಸದಿಗಂತ ವರದಿ, ಕೊಡಗು:

ಮೈಸೂರಿನಿಂದ ಕುಶಾಲನಗರದವರೆಗೆ ರೈಲು ಮಾರ್ಗ ನಿರ್ಮಾಣ ಯೋಜನೆಗೆ ತಾನು ಬದ್ಧನಾಗಿದ್ದು, ರೈಲು ಮಾರ್ಗದ ಅಂತಿಮ ಹಂತದ ಯೋಜನಾ ವರದಿ ತಯಾರಾಗುತ್ತಿದೆ ಎಂದು ಕೊಡಗು-ಮೈಸೂರು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.
ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದಿಂದ ಶೇ. 50ರ ಯೋಜನಾ ವೆಚ್ಚ ಮತ್ತು ಭೂಸ್ವಾಧೀನ ಪ್ರಕ್ರಿಯೆ ಕಾರ್ಯ ಬಾಕಿ ಇದ್ದು, ರಾಜ್ಯ ಸರ್ಕಾರ ತ್ವರಿತ ಗತಿಯಲ್ಲಿ ಕಡತ ವಿಲೇವಾರಿ ಮಾಡಿದ್ದೇ ಆದಲ್ಲಿ ರೈಲು ಯೋಜನೆ ಕೂಡಾ ಬಿರುಸು ಪಡೆಯಲಿದೆ ಎಂದರಲ್ಲದೆ, ರೈಲು ಮಾರ್ಗ ಯೋಜನೆ ಅನುಷ್ಠಾನ ನಿಶ್ಚಿತ ಎಂದರು.
ಚತುಷ್ಪಥ ರಸ್ತೆ ಕಾಮಗಾರಿ ಶೀಘ್ರ ಆರಂಭ:
ಶ್ರೀರಂಗಪಟ್ಟಣ – ಗುಡ್ಡೆಹೊಸೂರು ನಡುವೆ ನಾಲ್ಕು ಪಥದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯೂ ಮೇ ತಿಂಗಳಿನಲ್ಲಿ ಆರಂಭವಾಗಲಿದ್ದು, ನಾಲ್ಕು ಸಾವಿರ ಕೋಟಿ ರೂ. ವೆಚ್ಚದ ಕಾಮಗಾರಿ ಎರಡೂವರೆ ವರ್ಷಗಳಲ್ಲಿ ಮುಕ್ತಾಯಗೊಳ್ಳಲಿದೆ ಎಂದು ಅವರು ಇದೇ ಸಂದರ್ಭ ತಿಳಿಸಿದರು.
ಸುಮಾರು 9500 ಕೋಟಿ ರೂ. ವೆಚ್ಚದ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ದಸರಾಕ್ಕೂ ಮುನ್ನ ಉದ್ಘಾಟನೆಯಾಗಲಿದ್ದು, ಇದು ಕಾರ್ಯಾರಂಭವಾದಲ್ಲಿ ಕೆಂಗೇರಿಯಿಂದ ಮೈಸೂರಿಗೆ ಕೇವಲ ಒಂದು ಗಂಟೆಯಲ್ಲಿ ಪ್ರಯಾಣಿಸಬಹುದು. ಅದೇರೀತಿ ಶ್ರೀರಂಗಪಟ್ಟಣ – ಗುಡ್ಡೆಹೊಸೂರು ಹೆದ್ದಾರಿ ಕೂಡಾ ಒಂದು ಗಂಟೆ ಪ್ರಯಾಣದ ಅವಧಿಯಾಗಲಿದ್ದು, ಕೆಂಗೇರಿಯಿಂದ ಕುಶಾಲನಗರಕ್ಕೆ ಕೇವಲ ಎರಡು ಗಂಟೆಯಲ್ಲಿ ಪ್ರಯಾಣಿಸಬಹುದಾಗಿದೆ ಎಂದು ವಿವರಿಸಿದರು.
ಪ್ರಯಾಣಿಕರಿಗೆ, ಪ್ರವಾಸಿಗರಿಗೆ ನೆರವು ನೀಡುವ, ಪರಿಸರಕ್ಕೆ ಹಾನಿಯಾಗದಂತೆ ಜಾರಿಯಾಗುತ್ತಿರುವ ಮಹತ್ತರ ಯೋಜನೆ ಇದಾಗಿದೆ ಎಂದೂ ಅವರು ನುಡಿದರು.
ಕೋವಿ ಹಕ್ಕಿನ ವಿವಾದ: ಕೊಡಗಿನಲ್ಲಿ ಉದ್ಭವಿಸಿರುವ ಕೋವಿ ಹಕ್ಕಿನ ವಿವಾದದ ಕುರಿತು ಪ್ರಸ್ತಾಪಿಸಿದ ಅವರು, ಕೊಡಗಿನ ಜಮ್ಮಾ ಹಿಡುವಳಿದಾರರಿಗೆ ಬ್ರಿಟಿಷರ ಕಾಲದಲ್ಲಿಯೇ ಲಭಿಸಿರುವ ವಿಶೇಷವಾದ ಹಕ್ಕು ಇದಾಗಿದೆ. ಕನ್ನಡನಾಡಿಗೆ ಹಾಗೂ ರಾಷ್ಟ್ರಕ್ಕೆ ಕೊಡಗಿನ ಕೊಡುಗೆ ಅಪಾರವಾಗಿದ್ದು,ಕೊಡಗಿನ ಜನತೆಯ ಕೋವಿ ಹಕ್ಕು ಕಸಿಯುವ ಪ್ರಶ್ನೆಯೇ ಇಲ್ಲ ಎಂದು ಸಂಸದ ಪ್ರತಾಪ್ ಸಿಂಹ ಸ್ಪಷ್ಟಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಶಾಸಕ ಕೆ.ಜಿ.ಬೋಪಯ್ಯ, ಪಶ್ಚಿಮಘಟ್ಟ ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷ ಶಾಂತೆಯಂಡ ರವಿ ಕುಶಾಲಪ್ಪ, ಮಡಿಕೇರಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ರಮೇಶ್ ಹೊಳ್ಳ, ಮಡಿಕೇರಿ ನಗರಸಭಾ ಸದಸ್ಯ ಅಪ್ಪಣ್ಣ ಹಾಜರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!