ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ ಪಟಾಕಿ ಗೋಡೌನ್ ಸ್ಫೋಟಗೊಂಡಿದ್ದು, ನಾಲ್ವರು ಕಾರ್ಮಿಕರು ಮೃತಪಟ್ಟಿದ್ದಾರೆ.
ಕುಕ್ಕೇಡಿ ಗ್ರಾಮದ ಕಟ್ಯಾರು ಪ್ರದೇಶದಲ್ಲಿ ಅವಘಡ ಸಂಭವಿಸಿದ್ದು, ತಕ್ಷಣವೇ ಸ್ಥಳಕ್ಕೆ ವೇಣೂರು ಪೊಲೀಸರು ದೌಡಾಯಿಸಿದ್ದಾರೆ. ಕೇರಳ ನಿವಾಸಿಗಳಾದ ಸ್ವಾಮಿ, ವರ್ಗೀಸ್, ಅರಿಸೀಕೆರೆಯ ಚೇಚನ್ ಮೃತಪಟ್ಟಿದ್ದಾರೆ. ಪಟಾಕಿ ಗೋಡೌನ್ ಸ್ಫೋಟದ ತೀವ್ರತೆ ಎಷ್ಟಿತ್ತೆಂದರೆ ಮೃತದೇಹಗಳು ಛಿದ್ರಛಿದ್ರವಾಗಿದ್ದು, ದೂರ ದೂರದವರೆಗೂ ದೇಹದ ಭಾಗಗಳು ಹಾರಿವೆ.
ಆರು ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಟ್ಟೋಡಿ ನಿವಾಸಿ ಬಶೀರ್ ಅವರ ಜಮೀನು ಇದಾಗಿದ್ದು, ಒಂಬತ್ತು ಮಂದಿ ಇಲ್ಲಿ ಪಟಾಕಿ ತಯಾರು ಮಾಡುತ್ತಿದ್ದರು ಎನ್ನುವ ಮಾಹಿತಿ ಹೊರಬಿದ್ದಿದೆ.
ನಳಿನ್ ಕುಮಾರ್ ಕಟೀಲು ಭೇಟಿ
ಸ್ಥಳಕ್ಕೆ ಸಂಸದ ನಳಿನ್ ಕುಮಾರ್ ಕಟೀಲು ಭೇಟಿ ನೀಡಿದ್ದು, ಘಟನೆ ಬಗ್ಗೆ ಮಾಹಿತಿ ಪಡೆದಿದ್ದಾರೆ. ಸರ್ಕಾರ ಈ ಬಗ್ಗೆ ತನಿಖೆ ಮಾಡಬೇಕು, ಸ್ಫೋಟದ ತೀವ್ರತೆ ಅತಿಯಾಗಿದೆ. ಇದು ಭೀಕರ ಘಟನೆ ಈ ಬಗ್ಗೆ ಅನುಮಾನಗಳು ಮೂಡುವಂತಿದೆ. ಮೃತರ ಕುಟುಂಬಗಳಿಗೆ ಪರಿಹಾರ ಹಾಗೂ ಗಾಯಗೊಂಡವರ ಚಿಕಿತ್ಸೆಗೆ ಸರ್ಕಾರ ನೆರವಾಗಬೇಕು ಎಂದಿದ್ದಾರೆ.
ಗ್ರೆನೇಡ್ ತಯಾರಿ?
ಪಟಾಕಿ ಗೋಡೌನ್ ಸ್ಫೋಟಗೊಂಡು ಮೂವರು ಮೃತಪಟ್ಟಿದ್ದಾರೆ. ಮೂರು ಮೃತದೇಹಗಳು ಛಿದ್ರವಾದ ಸ್ಥಿತಿಯಲ್ಲಿ ಪತ್ತೆಯಾಗಿವೆ. ಇದರಿಂದ ಸಾಕಷ್ಟು ಅನುಮಾಗಳು ಮೂಡಿದ್ದು, ಗ್ರೆನೇಡ್ ತಯಾರಿ ನಡೆದಿತ್ತಾ ಎನ್ನುವ ಅನುಮಾನ ಎದ್ದಿದೆ. ಮೇಲ್ನೋಟಕ್ಕೆ ಬಾಂಬ್ ಸಿಡಿದಷ್ಟು ದೊಡ್ಡ ಮಟ್ಟದ ಸದ್ದು ಬಂದಿದೆ ಎನ್ನಲಾಗಿದೆ. ಜೊತೆಗೆ ಸುತ್ತಮುತ್ತ ಗ್ರೆನೇಡ್ ಮಾದರಿ ವಸ್ತುಗಳು ಪತ್ತೆಯಾಗಿವೆ. ಪಟಾಕಿ ಶಬ್ದ ಇಷ್ಟೊಂದು ಬರುವುದಿಲ್ಲ ಹಾಗೂ ಮೃತದೇಹಗಳ ಸ್ಥಿತಿ ಹೀಗಾಗುವುದಿಲ್ಲ ಎನ್ನುವುದು ಸ್ಥಳೀಯರು ಅನುಮಾನವಾಗಿದೆ. ಫೋರೆನ್ಸಿಕ್ ತಂಡ ಗ್ರೆನೇಡ್ ಮಾದರಿಯ ವಸ್ತುವನ್ನು ಪರಿಶೀಲಿಸುತ್ತಿದೆ.