ಹೊಸ ದಿಗಂತ ವರದಿ, ಕಲಬುರಗಿ:
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವುದೊಂದೆ ನಮ್ಮ ಗುರಿಯಾಗಿರಲಿ,ಯಾರು ಸಿಎಂ ಆಗುತ್ತಾರೆ,ಯಾರು ಮಂತ್ರಿ ಆಗುತ್ತಾರೆ ಅದು ಪಕ್ಷದ ಹೈಕಮಾಂಡ್ ತೀಮಾ೯ನ ಮಾಡಲಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸ್ಪಷ್ಟ ಪಡಿಸಿದ್ದಾರೆ.
ನಗರದ ನೂತನ ವಿದ್ಯಾಲಯದ ಮೈದಾನದಲ್ಲಿ ಆಯೋಜಿಸಿದ್ದ ಕಲ್ಯಾಣ ಕ್ರಾಂತಿ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿ, ನಾನು ಯಾವುದನ್ನು ಬಯಸಲಿಲ್ಲ. ಎಲ್ಲವೂ ನನಗೆ ಹುಡುಕಿಕೊಂಡು ಬಂದಿವೆ.ನನಗೆ ಎಐಸಿಸಿ ಸ್ಥಾನ ಸಿಕ್ಕಿದ್ದು,ಈ ಭಾಗದ ಜನರ ಆಶೀರ್ವಾದ ಮುಖ್ಯ ಕಾರಣವೆಂದರು.
ಕ.ಕ ಭಾಗದಲ್ಲಿ 50000 ಹುದ್ದೆಗಳು ಖಾಲಿಇವೆ. ಸರ್ಕಾರ ಈ ಹುದ್ದೆಗಳನ್ನು ಯಾಕೆ ತುಂಬುತ್ತಿಲ್ಲ? ನಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಆಗ ಕೇವಲ ಕ.ಕ.ಭಾಗ ಮಾತ್ರವಲ್ಲದೇ ಇಡೀ ರಾಜ್ಯದ ಖಾಲಿ ಹುದ್ದೇಗಳನ್ನು ತುಂಬುತ್ತೇವೆ ಎಂದು ಭರವಸೆ ನೀಡಿದರು.
ಕೇಂದ್ರದ ಬಿಜೆಪಿ ಈ ರಾಜ್ಯಕ್ಕೆ ಯಾವುದೇ ಪ್ರಮುಖ ಯೋಜನೆ ತಂದಿಲ್ಲ. ಕೈಗಾರಿಕೆ ಸ್ಥಾಪನೆ ಮಾಡಿಲ್ಲ. ಆದರೂ ಕೆಲವರು ಮೋದಿ ಹೆಸರು ಹೇಳುತ್ತಿದ್ದಾರೆ. ಗುಜರಾತ್ ನಂತರ ಈಗ ರಾಜ್ಯಕ್ಕೆ ಮೋದಿ- ಶಾ ಬರುತ್ತಿದ್ದಾರೆ. ನಾನು ನಮ್ಮ ಪಕ್ಷದ ನಾಯಕರಿಗೆ ಹೇಳುವುದಿಷ್ಟೆ ನೀವೆಲ್ಲ ಒಗ್ಗಟ್ಟಾಗಿ ಕೆಲಸ ಮಾಡಿ. ಯಾರು ಸಿಎಂ ಆಗುತ್ತಾರೆ ಯಾರು ಮಂತ್ರಿ ಆಗುತ್ತಾರೆ ಅದನ್ನು ಹೈಕಮಾಂಡ್ ನಿರ್ಧಾರ ಮಾಡಲಿದೆ. ನಾವೇ ಕಚ್ಚಾಡಿದರೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗುತ್ತದೆ. ಹಾಗಾಗಿ, ನೀವೆಲ್ಲ ಒಂದಾಗಿ ಕೆಲಸ ಮಾಡಿ ಎಂದು ಸಲಹೆ ನೀಡಿದರು.