ದಿಗಂತ ವರದಿ ಮಡಿಕೇರಿ:
ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಯೊಬ್ಬರು ದಿಢೀರ್ ನಾಪತ್ತೆಯಾದ ಘಟನೆ ನಡೆದಿದ್ದು, ಐದು ದಿನಗಳ ಬಳಿಕ ಆತನನ್ನು ಏಳನೇ ಹೊಸಕೋಟೆಯಲ್ಲಿ ಪತ್ತೆ ಮಾಡಲಾಗಿದೆ.
ಕೂಡುಮಂಗಳೂರು ಗ್ರಾಮ ಪಂಚಾಯಿತಿಯ ಪೌರ ಕಾರ್ಮಿಕ, ಜನತಾ ಕಾಲೊನಿಯ ನಿವಾಸಿ ರಂಗ (43) ಎಂಬವರೇ ಆಸ್ಪತ್ರೆ ವಾರ್ಡ್’ನಿಂದ ನಾಪತ್ತೆಯಾದವರು.
ಕಳೆದ 20 ವರ್ಷಗಳಿಂದ ಪೌರಕಾರ್ಮಿಕರಾಗಿ ಕೆಲಸ ಮಾಡಿಕೊಂಡಿದ್ದ ರಂಗ ಅನಾರೋಗ್ಯಕ್ಕೆ ಒಳಗಾಗಿದ್ದು, ಅವರನ್ನು ಪತ್ನಿ ಲತಾ ಕುಶಾಲನಗರದ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದರು.
ಆದರೆ ಫೆ.18ರ ರಾತ್ರಿ 2.30ರ ಸುಮಾರಿಗೆ ಶೌಚಾಲಯಕ್ಕೆ ಹೋಗಿ ಬರುವುದಾಗಿ ಹೊರಟ ರಂಗ ಆಸ್ಪತ್ರೆಯಿಂದ ನಾಪತ್ತೆಯಾಗಿದ್ದರು. ಅವರಿಗಾಗಿ ಹುಡುಕಾಟ ನಡೆಸಿ ಸುಸ್ತಾದ ಪತ್ನಿ ಲತಾ ಕುಶಾಲನಗರ ಪೊಲೀಸ್ ಠಾಣೆಯಲ್ಲಿ ವ್ಯಕ್ತಿ ನಾಪತ್ತೆ ಪ್ರಕರಣ ದಾಖಲಿಸಿದ್ದರು.
ಪಂಚಾಯಿತಿಯ ಆಡಳಿತ ಮಂಡಳಿಯ ಸಹಕಾರದೊಂದಿಗೆ ಸತತವಾಗಿ 5 ದಿನಗಳಿಂದ ಹುಡುಕಾಟ ನಡೆಸಿದಾಗ, ರಂಗ ಬೋಯಿಕೇರಿಯಲ್ಲಿ ಇರುವ ಸುಳಿವು ದೊರೆಯಿತಾದರೂ, ಪ್ರಯೋಜನವಾಗಿರಲಿಲ್ಲ. ಆದರೆ ಗುರುವಾರ ಶಿವಲಿಂಗ ಎಂಬವರು ಹೊಸಕೋಟೆಗೆ ಹೋದ ಸಂದರ್ಭ ರಂಗ ಪತ್ತೆಯಾಗಿದ್ದು, ಅವರನ್ನು ಕರೆದೊಯ್ದು ಪಂಚಾಯತ್’ಗೆ ಒಪ್ಪಿಸಿದ್ದಾರೆ.
ಕಾಣೆಯಾಗಿದ್ದ ರಂಗನನ್ನು ಕರೆತಂದ ಶಿವಲಿಂಗ ಅವರಿಗೆ ಕೃತಜ್ಞತೆ ಸಲ್ಲಿಸಿರುವ ಪಂಚಾಯತ್ ಅಧ್ಯಕ್ಷೆ ಇಂದಿರಾ ರಮೇಶ್ ಹಾಗೂ ವಾರ್ಡ್ ಸದಸ್ಯರು ರಂಗ ಅವರ ಮನೆಗೆ ತೆರಳಿ ಯೋಗಕ್ಷೇಮ ವಿಚಾರಿಸಿದ್ದಾರೆ. ಅಲ್ಲದೆ ಅವರನ್ನು ಮತ್ತೆ ಆಸ್ಪತ್ರೆಗೆ ದಾಖಲಿಸಲು ಕ್ರಮಕೈಗೊಂಡಿದ್ದಾರೆ.