ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಷ್ಟ್ರೋದ್ಧಾರದ ಹಿತದೃಷ್ಟಿ, ಸನಾತನ ಹಿಂದು ಧರ್ಮದ ಉಳಿವು, ಏಳಿಗೆ ಹಾಗೂ ಲೋಕ ಸುಭಿಕ್ಷೆಗಾಗಿ ತರಂಗಿಣಿ ಮಿತ್ರ ಮಂಡಳಿ ಉಡುಪಿ ಜಿಲ್ಲೆಯ ಪಡುಬಿದ್ರಿ ಹಾಗೂ ಪಾದೆಬೆಟ್ಟು ಬ್ರಾಹ್ಮಣ ವಲಯದ ಸಹಕಾರದೊಂದಿಗೆ ಅವಿಭಜಿತ ಜಿಲ್ಲೆಯ ಋತ್ವಿಜ ಗಡಣವು ವಿಷ್ಣು ಸಹಸ್ರನಾಮ ಪಾರಾಯಣ, ಲಕ್ಷ್ಮೀ ಶೋಭಾನೆ ಪಠಣ, ರಾಮಭದ್ರ ಮಂತ್ರ ಹೋಮ, ಗಣಪತಿ ಅಥರ್ವಶೀರ್ಷ ಹೋಮ, ರುದ್ರ ಯಾಗ, ಚಂಡಿಕಾ ಯಾಗ, ಮನ್ಯು ಸೂಕ್ತ, ಋಷಭ ಸೂಕ್ತ ಪಾರಾಯಣ, ಹೋಮಗಳನ್ನು ಪಾದೆಬೆಟ್ಟು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಉಭಯ ಜಿಲ್ಲೆಗಳ ಬ್ರಾಹ್ಮಣ ಋತ್ವಿಜರ ಸಮಾಗಮದೊಂದಿಗೆ ನಡೆಸಲಾಯಿತು.
ಬಹುವಿಧ ಹೋಮ ಹವನಾದಿಗಳ ಮಂಗಳಾರ್ಪಣೆಯಲ್ಲಿ ನೆರೆದಿದ್ದವರನ್ನು ಉದ್ದೇಶಿಸಿ ಮಾತನಾಡಿದ ವೇ. ಮೂ. ಅಶೋಕ್ ಆಚಾರ್ಯ ಕಲ್ಯ, ಧರ್ಮ ಮಾರ್ಗದಲ್ಲಿ ನಾವೆಲ್ಲರೂ ಮುಂದುವರಿಯಲು ಸಹಕಾರಿಯಾಗಿ ಮುಂದೆಯೂ ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರಕಾರದ ಆಡಳಿತವನ್ನು ಬಯಸಿ, ರಾಮ ಮಂದಿರ ನಿರ್ಮಾಣವನ್ನು ಬೆಂಬಲಿಸಿ, ರಾಮ ರಾಜ್ಯದ ಕಲ್ಪನೆ ಹಾಗೂ ಮುಂದಿನ ಚುನಾವಣೆಯಲ್ಲಿ ಮೋದಿ ಜಯಿಸಿ ಅನಿಷ್ಟಗಳು ನಿವಾರಣೆಯಾಗಿ ಲೋಕ ಸುಭಿಕ್ಷೆ ನೆಲೆಸಲು ವಿಶೇಷ ಹವನಗಳನ್ನು ನಡೆಸಲಾಗಿದೆ ಎಂದರು.
ಪುರೋಹಿತ ಸಂಘದ ಪದಾಧಿಕಾರಿಗಳಾದ ಗೋಪಾಲಕೃಷ್ಣ ಜೋಯಿಸ ಬುಡ್ನಾರು, ಪಡುಬಿದ್ರಿ ಶ್ರೀ ಕೃಷ್ಣಾಪುರ ಮಠದ ಶ್ರೀನಿವಾಸ ಉಪಾಧ್ಯಾಯ, ರಾಜೇಶ್ ಉಪಾಧ್ಯಾಯರ ಮಾರ್ಗದರ್ಶನಲ್ಲಿ ನಡೆದಿದ್ದ ಈ ಕಾರ್ಯಕ್ರಮದಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಅನುವಂಶಿಕ ಅರ್ಚಕ ಶ್ರೀ ಲಕ್ಷ್ಮೀನಾರಾಯಣ ಆಸ್ರಣ್ಣ, ಕಾಪು ಕ್ಷೇತ್ರ ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಶಾಸಕ ಕೆ. ರಘುಪತಿ ಭಟ್, ಪುರೋಹಿತರಾದ ಹೆರ್ಗ ರವೀಂದ್ರ ಭಟ್, ವಸಂತ ಭಟ್ ನೆಲ್ಲಿತೀರ್ಥ, ಮಧುಸೂದನ ತಂತ್ರಿ ತೊಟ್ಟಂ, ವೇದವ್ಯಾಸ ಭಟ್ ಹೆರ್ಗ, ಸತ್ಯನಾರಾಯಣ ಉಡುಪ, ವಿಹಿಂಪ ಭಜರಂಗ ದಳದ ಉಡುಪಿ ಜಿಲ್ಲಾ ಅಧ್ಯಕ್ಷ ವಿಷ್ಣುಮೂರ್ತಿ ಆಚಾರ್ಯ ಪಾದೆಬೆಟ್ಟು ಮತ್ತಿತರರು ಭಾಗವಹಿಸಿದ್ದರು.