ಮಹಾರಾಷ್ಟ್ರ ಮಾಜಿ ಸಿಎಂ ಉದ್ಧವ್ ಠಾಕ್ರೆ ಆಸ್ಪತ್ರೆಗೆ ದಾಖಲು: ಆರೋಗ್ಯದ ಕುರಿತು ಪುತ್ರ ಆದಿತ್ಯ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿಉದ್ಧವ್ ಠಾಕ್ರೆ ಅವರ ಆರೋಗ್ಯದಲ್ಲಿ ದಿಢೀರ್​ ಏರುಪೇರಾಗಿರುವ ಹಿನ್ನೆಲೆಯಲ್ಲಿ ಅವರನ್ನು ಮುಂಬೈನ ರಿಲಯನ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಠಾಕ್ರೆ ಅವರನ್ನು ಆಸ್ಪತ್ರೆಗೆ ಸೇರಿಸಿದ ವಿಷಯ ಕೇಳುತ್ತಲೇ ಅಭಿಮಾನಿಗಳು ಕಂಗಾಲಾಗಿದ್ದು, ರಾಜಕೀಯ ಧುರೀಣರು ಆಸ್ಪತ್ರೆಗೆ ದೌಡಾಯಿಸುತ್ತಿದ್ದಾರೆ. ಇಂದು ಬೆಳಿಗ್ಗೆ ಅವರನ್ನು ದಾಖಲು ಮಾಡಲಾಗಿದ್ದು, ವಿಷಯ ಬಹಳ ಹೊತ್ತಿನ ಬಳಿಕ ರಿವೀಲ್​ ಆಗಿದೆ. ಅವರಿಗೆ ತಪಾಸಣೆ ನಡೆಸಲಾಗುತ್ತಿದೆ.

ಇದೀಗ ಉದ್ಧವ್​ ಠಾಕ್ರೆ ಅವರ ಪುತ್ರ ಮತ್ತು ಪಕ್ಷದ ನಾಯಕ ಆದಿತ್ಯ ಠಾಕ್ರೆ ಅವರು ಆರೋಗ್ಯದ ಮಾಹಿತಿ ನೀಡಿದ್ದಾರೆ.

ಸೋಷಿಯಲ್​ ಮೀಡಿಯಾದಲ್ಲಿ ತಂದೆಯ ಆರೋಗ್ಯ ಸ್ಥಿತಿಯ ಕುರಿತು ಅಪ್​ಡೇಟ್​ ನೀಡಿರುವ ಆದಿತ್ಯ ಠಾಕ್ರೆ ಅವರು, ಈ ಭೇಟಿ ಪೂರ್ವ ಯೋಜಿತವಾಗಿತ್ತು. ಮಾಮೂಲಿ ತಪಾಸಣೆ ನಡೆದಿದೆ. ಅವರು ಆರೋಗ್ಯವಾಗಿದ್ದಾರೆ ಎಂದು ಹೇಳಿದ್ದಾರೆ.

ಇಂದು ಬೆಳಿಗ್ಗೆ, ಉದ್ಧವ್ ಠಾಕ್ರೆ ಅವರನ್ನು ಸರ್ ಎಚ್ಎನ್ ರಿಲಯನ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ನಿಮ್ಮ ಶುಭಾಶಯಗಳೊಂದಿಗೆ, ಎಲ್ಲವೂ ಚೆನ್ನಾಗಿದೆ, ಮತ್ತು ಅವರು ಕೆಲಸ ಮಾಡಲು ಮತ್ತು ಜನರಿಗೆ ಸೇವೆ ಸಲ್ಲಿಸಲು ಸಂಪೂರ್ಣವಾಗಿ ಸಿದ್ಧರಾಗಿದ್ದಾರೆ ಎಂದು ಆದಿತ್ಯ ಅವರು ಎಕ್ಸ್​ ಖಾತೆಯಲ್ಲಿ ಮಾಹಿತಿ ನೀಡಿದ್ದಾರೆ.

ಅಂದಹಾಗೆ, 2012ರಲ್ಲಿ ಉದ್ಧವ್​ ಠಾಕ್ರೆ ಅವರು ಆಂಜಿಯೋಪ್ಲ್ಯಾಸ್ಟಿಗೆ ಒಳಗಾಗಿದ್ದರು ಎನ್ನಲಾಗಿದೆ. 2014ರಲ್ಲಿ ಅವರನ್ನು ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರಿಗೆ ಆಂಜಿಯೋಪ್ಲಾಸ್ಟಿ ಮಾಡಲಾಗಿತ್ತು ಎಂದು ತಿಳಿದುಬಂದಿದೆ. ಅವರ ಹೃದಯದಲ್ಲಿ ಮೂರು ಮುಖ್ಯ ಅಪಧಮನಿಗಳಲ್ಲಿನ ಸಮಸ್ಯೆ ಇದ್ದ ಹಿನ್ನೆಲೆಯಲ್ಲಿ ಎಂಟು ಸ್ಟೆಂಟ್​ಗಳನ್ನು ಅಳವಡಿಸಲಾಗಿದೆ. ಆದ್ದರಿಂದ ಅವರು ಆಗಾಗ್ಗೆ ತಪಾಸಣೆಗೆ ಹಾಜರು ಆಗುತ್ತಿರುತ್ತಾರೆ. ಇಂದು ಆರೋಗ್ಯದಲ್ಲಿ ಏರುಪೇರಾಗಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!