ಇಚ್ಲಂಪಾಡಿ ಹಾಲು ಉತ್ಪಾದಕರ ಸಂಘದ ಮಾಜಿ ಅಧ್ಯಕ್ಷ ಆತ್ಮಹತ್ಯೆ

ದಿಗಂತ ವರದಿ ಪುತ್ತೂರು:

ನೆಲ್ಯಾಡಿ ಸಮೀಪದ ಇಚ್ಲಂಪಾಡಿ ಗ್ರಾಮದ ಬೀಡುಬೈಲು ನಿವಾಸಿ, ಇಚ್ಲಂಪಾಡಿ ಹಾಲು ಉತ್ಪಾದಕರ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ನಾಗರಾಜ ಆರಿಗ (78) ಮೇ 14 ರಂದು ಆತ್ಮ ಹತ್ಯೆ ಮಾಡಿಕೊಂಡಿದ್ದಾರೆ.

ನಾಗರಾಜ ಆರಿಗ, ಬೀಡುಬೈಲು ಮನೆಯಲ್ಲಿ ಕಳೆದ ಎರಡು ವರ್ಷಗಳಿಂದ ಒಬ್ಬಂಟಿಯಾಗಿ ವಾಸವಾಗಿದ್ದರು. ಅವರ ಮನೆ ಕೆಲಸದವರಾದ ಸುಧಾಕರ ಅವರು ಮೇ 14ರಂದು ಬೆಳಗ್ಗೆ 6.30 ಗಂಟೆಗೆ ನಾಗರಾಜ ಆರಿಗ ಅವರ ಮನೆಯಿಂದ ಎದ್ದು ಹೋದವರು ಹಗಲು ಕೆಲಸಕ್ಕೆ ಬಂದಿರಲಿಲ್ಲ.

ಅದೇ ದಿನ ರಾತ್ರಿ 8.45 ಗಂಟೆಗೆ ಮನೆಗೆ ಮಲಗಲೆಂದು ಬಂದಾಗ ಮನೆಯಲ್ಲಿ ಲೈಟ್ ಉರಿಯದಿರುವುದನ್ನು ಕಂಡು ಮನೆಯ ಬಳಿ ಹೋಗಿ ನಾಗರಾಜ ಆರಿಗ ಅವರನ್ನು ಜೋರಾಗಿ ಕರೆದಾಗ ಮಾತನಾಡದೇ ಇದ್ದು ಸುತ್ತಮುತ್ತ ಹುಡುಕಾಡಿದಾಗ ರಾತ್ರಿ 9.45ರ ವೇಳೆಗೆ ಮನೆಯ ಸಮೀಪದಲ್ಲಿದ್ದ ಹುಣಸೆ ಮರದ ಕೊಂಬೆಗೆ ನೈಲಾನ್ ಹಗ್ಗವನ್ನು ಬಿಗಿದುಕೊಂಡು ನೇತಾಡುತ್ತಿರುವುದು ಕಂಡು ಬಂದಿದೆ. ಈ ಬಗ್ಗೆ ಸುಧಾಕರ ಅವರು ನಾಗರಾಜ ಆರಿಗ ಅವರ ಪುತ್ರಿ ರಶ್ಮಿ ಅವರಿಗೆ ಪೋನ್ ಮಾಡಿ ವಿಷಯ ತಿಳಿಸಿದ್ದರು. ಅವರು ಮೇ 15ರದು ಬೆಳಗ್ಗೆ 5 ಗಂಟೆಗೆ ಬೀಡುಬೈಲು ಮನೆಗೆ ಬಂದಾಗ ನಾಗರಾಜ ಆರಿಗ ಮೃತಪಟ್ಟಿದ್ದರು.

ನಾಗರಾಜ ಆರಿಗ, ಜೀವನದಲ್ಲಿ ಜುಗುಪ್ಸೆಗೊಂಡು ಮನೆಯ ಸಮೀಪದ ಹುಣಸೆ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಅವರ ಪುತ್ರಿ, ಬೆಂಗಳೂರಿನಲ್ಲಿ ನೆಲೆಸಿರುವ ಶಿಲ್ಪಾ ಎಂಬವರು ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಾಗರಾಜ ಆರಿಗ ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಕೃಪಾ ಪೋಷಿತ ಯಕ್ಷಗಾನ ಮಂಡಳಿಯಲ್ಲಿ ಮೇಲ್ವಿಚಾರಕರಾಗಿಯೂ ಸೇವೆ ಸಲ್ಲಿಸಿದ್ದರು. ಅಲ್ಲದೆ, ಧರ್ಮಸ್ಥಳ ಮೇಳದಲ್ಲಿ ಹಲವು ವರ್ಷಗಳ ಕಾಲ ಚೆಂಡೆಗಾರರಾಗಿ ಕೆಲಸ ಮಾಡಿದ್ದು, ಚೆಂಡೆ ನಾಗರಾಜ ಎಂದೇ ಕರೆಸಿಕೊಂಡಿದ್ದರು. ಇಚ್ಲಂಪಾಡಿ ಬೀಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿಯಲ್ಲೂ ಸಕ್ರಿಯವಾಗಿ ಕೆಲಸ ಮಾಡಿಕೊಂಡಿದ್ದರು.

ಮೃತರ ಪತ್ನಿ ಕುಶಾಲ ಎನ್.ಆರಿಗ ಅವರು ಎರಡು ವರ್ಷದ ಹಿಂದೆ ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿದ್ದರು. ಮೃತರು ಮೂವರು ಪುತ್ರಿಯರು ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!