ಹೊಸದಿಗಂತ ವರದಿ,ಮಡಿಕೇರಿ:
ಮಡಿಕೇರಿಯ ಮಾಜಿ ಯೋಧ ಸಂದೇಶ್ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಡಿಕೇರಿ ನಗರ ಠಾಣೆಯಲ್ಲಿ ಐದು ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ.
ಸಂದೇಶ್ ಅವರು ಡೆತ್ ನೋಟ್’ನಲ್ಲಿ ನಮೂದಿಸಿದ್ದ ಪ್ರಕರಣದ ಪ್ರಮುಖ ಆರೋಪಿ ಜೀವಿತಾ ಹಾಗೂ ಆಕೆಯ ತಂಗಿ, ತಾಯಿ, ಇಬ್ಬನಿ ಸ್ಪ್ರಿಂಗ್ ರೆಸಾರ್ಟ್ ಮಾಲಕ ಸತ್ಯ, ಪೊಲೀಸ್ ಸತೀಶ್ ಹಾಗೂ ಇತರ ಇಬ್ಬರನ್ನು ಸೇರ್ಪಡೆಗೊಳಿಸಿ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 306, 384, ರೆಡ್ ವಿತ್ 34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಆರೋಪಿಗಳು ತಲೆಮರೆಸಿಕೊಂಡಿದ್ದು, ಪ್ರಕರಣದ ತನಿಖೆಗೆ ಪೊಲೀಸರ ವಿಶೇಷ ತಂಡ ರಚಿಸಿರುವ ಪೊಲೀಸರು, ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.
ಮಂಗಳವಾರ ಡೆತ್ ನೋಟ್ ಬರೆದಿಟ್ಟು ಸಂದೇಶ್ ನಾಪತ್ತೆತಾಗಿದ್ದರು. ನೋಟ್’ನಲ್ಲಿ ತಾನು ಜೀವಿತಾ ಹಾಗೂ ಇತರರ ಮಾನಸಿಕ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ನಮೂದಿಸಿದ್ದರಿಂದ ಸಂಬಂಧಿಕರು, ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ನಗರದ ಪಂಪಿನ ಕೆರೆ ಹಾಗೂ ಸುತ್ತಮುತ್ತ ಶೋಧ ನಡೆಸಿದ್ದರು.
ಅಂದು ಸಂಜೆ ಅವರ ಚಪ್ಪಲಿ ಹಾಗೂ ಮೊಬೈಲ್ ಕೆರೆಯ ಬಳಿ ಪತ್ತೆಯಾಗಿದ್ದರಿಂದ ಅವರು ಆತ್ಮಹತ್ಯೆ ಮಾಡಿಕೊಂಡಿರುವುದು ಬಹುತೇಕ ಖಾತರಿಯಾಗಿತ್ತು.
ಈ ಹಿನ್ನೆಲೆಯಲ್ಲಿ ಮಲ್ಪೆಯ ನುರಿತ ಈಜು ಹಾಗೂ ಮುಳುಗು ತಜ್ಞ ಈಶ್ವರ್ ಹಾಗೂ ಅವರ ತಂಡದ ನೆರವು ಪಡೆಯಲಾಗಿತ್ತು. ನಿರಂತರ ಶೋಧದ ಬಳಿಕ ಬುಧವಾರ ರಾತ್ರಿ 8.30ರವೇಳೆಗೆ ಸಂದೇಶ್ ಮೃತದೇಹ ಕೆರೆಯಲ್ಲಿ ಪತ್ತೆಯಾಗಿತ್ತು.
ಹನಿ ಟ್ರ್ಯಾಪ್’ಗೆ ಸಿಲುಕಿ ಸಂದೇಶ್ ಆತ್ಮಹತ್ಯೆಗೆ ಶರಣಾಗಿರುವುದಾಗಿ ಅವರ ಪತ್ನಿ ನೀಡಿದ ದೂರಿನ ಅನ್ವಯ ಇದೀಗ ಐವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು,ಇವರೊಂದಿಗೆ ಇತರ ಇಬ್ಬರನ್ನೂ ಸೇರಿಸಿಕೊಳ್ಳಲಾಗಿದೆ.