ಚಂದ್ರಶೇಖರ ಎಸ್ ಚಿನಕೇಕರ
ಚಿಕ್ಕೋಡಿ: ಮೃಗಶಿರ ಮಳೆ ಮುಗಿಯುತ್ತ ಬಂತು. ನೆಲಕ್ಕೆ ಒಂದು ಹನಿ ನೀರು ಬಿದ್ದಿಲ್ಲ. ವರುಣ ದೇವನ ಕೃಪೆಗಾಗಿ ಚಿಕ್ಕೋಡಿ ಉಪ ವಿಭಾಗದ ವಿವಿಧ ತಾಲೂಕುಗಳಲ್ಲಿಯ ಗ್ರಾಮಸ್ಥರು ಕಪ್ಪೆಗಳ ಮದುವೆ, ಕತ್ತೆಗಳ ಮದುವೆ, ದೇವರಿಗೆ ಜಲ ದಿಗ್ಭಂಧನ, ಜಲಾಭಿಷೇಕ, ಭಜನೆ ಮುಂತಾದ ಪೂಜೆ ಪುನಸ್ಕಾರಗಳ ಮೊರೆ ಹೋಗುತ್ತಿದ್ದಾರೆ.
ಈಗಾಗಲೇ ಮುಂಗಾರು ಹಂಗಾಮಿನ ಬಿತ್ತನೆ ಪೂರ್ಣಗೊಳ್ಳಬೇಕಿತ್ತು. ಬಿತ್ತನೆ ಪ್ರಮಾಣ ಶೇ. 20ನ್ನೂ ಕೂಡ ದಾಟಿಲ್ಲ. ನದಿ ತೀರದಲ್ಲಿ ಇರುವ ಕಬ್ಬು, ಮೆಕ್ಕೆಜೋಳ ಸೇರಿದಂತೆ ವಿವಿಧ ಬೆಳೆಗಳೇ ಸಕಾಲಕ್ಕೆ ಮಳೆ ಇಲ್ಲದೇ ಬಾಡಿ ಹೋಗುತ್ತಿವೆ. ಇನ್ನು ಅಲ್ಪ ಸ್ವಲ್ಪ ಮಳೆ ನಂಬಿ ಬಿತ್ತನೆ ಮಾಡಿದರೂ ಬೀಜ ಕೂಡ ಮೊಳಕೆ ಒಡೆದಿಲ್ಲ. ಕೆಲವೊಂದು ಕಡೆಗೆ ನಾಟಿಗೆಗಳು ಕಮರಿ ಹೋಗುತ್ತಿರುವುದು ಹೊಟ್ಟೆಯಲ್ಲಿ ಖಾರ ಕಲಿಸಿದ ಅನುಭವ ಅನ್ನದಾತನಿಗೆ ಆಗುತ್ತಿದೆ. ಮಳೆಯಾಶ್ರಿತ ಪ್ರದೇಶದಲ್ಲಂತೂ ಜನ ಜಾನುವಾರುಗಳಿಗೆ ಕುಡಿಯುವ ನೀರಿಗೂ ತತ್ವಾರ.
ಹೀಗಾಗಿ ಮೂಡಲಗಿ ತಾಲ್ಲೂಕಿನ ಹಳ್ಳೂರ ಗ್ರಾಮದಲ್ಲಿ ವಾರದಿಂದ ಗ್ರಾಮದ ಪ್ರತಿಯೊಂದು ದೇವಸ್ಥಾನಗಳಿಗೆ ತೆರಳಿ ಜಲಾಭೀಷೇಕ ಮಾಡುತ್ತಿದ್ದಾರೆ. ಹೀಗಾಗಿ ಗ್ರಾಮಸ್ಥರು ಕೆಲಸ ಕಾರ್ಯಗಳಿಗೆ ರಜೆ ಹೇಳಿದ್ದಾರೆ. ಭಜನೆ ಕೂಡ ಮಾಡುತ್ತಿದ್ದಾರೆ. ಇನ್ನು ಕೆಲವು ಕಡೆಗೆ ದೇವರಿಗೆ ಜಲ ದಿಗ್ಭಂಧನ ಹಾಕಿ ಮಳೆ ಬರಿಸು ಎಂದು ದೇವರಲ್ಲಿ ಮೊರೆ ಇಡುತ್ತಿದ್ದಾರೆ.
ಕಾಗವಾಡ ತಾಲೂಕಿನ ಉಗಾರ ಬುದ್ರುಕ ಗ್ರಾಮದಲ್ಲಿ ಮಳೆಗಾಗಿ ಮಾಜಿ ತಾಪಂ ಸದಸ್ಯ ಸಂತ ಖೋತ ಅವರ ನೇತೃತ್ವದಲ್ಲಿ ಒಂದು ಗಂಡು ಹಾಗೂ ಒಂದು ಹೆಣ್ಣು ಕತ್ತೆಗಳನ್ನು ತಂದು ಮದುವೆ ಮಾಡಿ ಗ್ರಾಮದ ತುಂಬೆಲ್ಲ ಮೆರವಣಿಗೆ ಮಾಡಲಾಯಿತು. ಹಾಗೆಯೇ ಅಥಣಿ ತಾಲ್ಲೂಕಿನ ಸಂಬರಗಿ ಗ್ರಾಮದಲ್ಲಿ ಗ್ರಾಮಸ್ಥರೆಲ್ಲ ಸೇರಿಕೊಂಡು ಶಾಸ್ತ್ರೋಕ್ತವಾಗಿ ಕತ್ತೆಗಳ ಮದುವೆ ವೈಭವದಿಂದ ಮಾಡಿದರು.
ಇನ್ನು ಕೆಲವು ಕಡೆಗೆ ಕಪ್ಪೆಗಳನ್ನು ತಂದು ಕಪ್ಪೆಗಳ ಮದುವೆ ಕೂಡ ಮಾಡುತ್ತಿರುವ ದೃಶ್ಯ ಕೂಡ ಸಾಮಾನ್ಯವಾಗಿದೆ. ಗುರ್ಜಿ ಪೂಜೆಯನ್ನು ಕೂಡ ಮಾಡುತ್ತಿದ್ದು, ತವೆ ಮೇಲೆ ಮಣ್ಣಿನ ಗುಡ್ಡೆ ಮಾಡಿಟ್ಟು ಅದಕ್ಕೆ ನೀರು ಹಾಕಿ ತಿರುಗಿಸುವ ಮೂಲಕ ಗುರ್ಜಿ ಪೂಜೆಯನ್ನು ಕೂಡ ಹಲವು ಕಡೆಗೆ ಮಾಡಲಾಗುತ್ತಿದೆ.
ಕೆಲವೊಂದು ಗ್ರಾಮಗಳ ಜನರು ಮಳೆಗಾಗಿ ಪ್ರಾರ್ಥಿಸಿ ತಮ್ಮೂರಿನ ದೇವಸ್ಥಾನಗಳಲ್ಲಿ ಭಜನೆ ಮಾಡುತ್ತ ದೇವರಲ್ಲಿ ಪ್ರಾರ್ಥಿಸಿಕೊಳ್ಳುತ್ತಿದ್ದಾರೆ. ಇನ್ನು ಕೆಲವು ಕಡೆಗೆ ಪುಟ್ಟದಾದ ಗಾಡಿಗಳನ್ನು ತಯಾರಿಸಿ ಅದರಲ್ಲಿ ದೇವಿಯನ್ನು ಪ್ರತಿಷ್ಠಾಪಿಸಿ ತಮ್ಮೂರಿನ ಸೀಮೆಯನ್ನು ದಾಟಿಸಿ ಗ್ರಾಮಕ್ಕೆ ಏನಾದರೂ ಪೀಡೆ ಅಂಟಿಕೊಂಡಿದ್ದರೆ ಹೋಗಲಿ, ಮಳೆ ಬರಲಿ ಎಂದು ಬೇಡಿಕೊಳ್ಳುತ್ತಿದ್ದಾರೆ.