May 26, 2026
Tuesday, May 26, 2026
spot_img

ಬಸ್ ಟಿಕೆಟ್ ಹರಿಯುತ್ತಿದ್ದ ಕೈಯಲ್ಲಿಂದು ಪದ್ಮಶ್ರೀ ಪ್ರಶಸ್ತಿ! ಕನ್ನಡಿಗರು ಹೆಮ್ಮೆ ಪಡಲೇಬೇಕಾದ ಅಂಕೇಗೌಡರ ಯಶೋಗಾಥೆ

ಸಾಧನೆಗೆ ಬಡತನವಾಗಲಿ, ವೃತ್ತಿಯಾಗಲಿ ಎಂದಿಗೂ ಅಡ್ಡಿಯಾಗುವುದಿಲ್ಲ ಎಂಬುದಕ್ಕೆ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಚಿನಕುರಳಿ ಗ್ರಾಮದ ಎಂ. ಅಂಕೇಗೌಡ ಜೀವಂತ ಉದಾಹರಣೆ. ಯಾವುದೇ ಸ್ವಾರ್ಥವಿಲ್ಲದೆ ಕೇವಲ ಅಕ್ಷರ ಪ್ರೀತಿಗಾಗಿ ತಮ್ಮ ಇಡೀ ಜೀವನವನ್ನೇ ಮುಡಿಪಾಗಿಟ್ಟ ಇವರ ನಿಸ್ವಾರ್ಥ ಸೇವೆಯನ್ನು ಗುರುತಿಸಿ, ಭಾರತ ಸರ್ಕಾರ ಇವರಿಗೆ 2026ನೇ ಸಾಲಿನ ಪ್ರತಿಷ್ಠಿತ ‘ಪದ್ಮಶ್ರೀ’ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮುರಿಂದ ಅಂಕೇಗೌಡ ಈ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ.

ಬಸ್ ಕಂಡಕ್ಟರ್ ಟು ಅಕ್ಷರ ಯೋಗಿ
ಅತ್ಯಂತ ಸಾಮಾನ್ಯ ರೈತ ಕುಟುಂಬದಲ್ಲಿ ಜನಿಸಿದ ಅಂಕೇಗೌಡರು ಬಾಲ್ಯದಿಂದಲೇ ಓದಿನ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದರು. ಮೈಸೂರು ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಒಬ್ಬ ಸಾಮಾನ್ಯ ಬಸ್ ಕಂಡಕ್ಟರ್ ಆಗಿ ವೃತ್ತಿಜೀವನ ಆರಂಭಿಸಿದ ಇವರು, ಟಿಕೆಟ್ ಹರಿಯುವ ಕೆಲಸದ ನಡುವೆಯೂ ಸಂಜೆ ಕಾಲೇಜಿಗೆ ಹೋಗಿ ಬಿ.ಎ. ಮತ್ತು ಕನ್ನಡದಲ್ಲಿ ಎಂ.ಎ. ಪದವಿ ಮುಗಿಸಿದರು. ತದನಂತರ ಪಾಂಡವಪುರ ಸಕ್ಕರೆ ಕಾರ್ಖಾನೆಯಲ್ಲಿ ವೇಳಾಧಿಕಾರಿಯಾಗಿ ಕೆಲಸ ಮಾಡಿ ನಿವೃತ್ತರಾದರು.

ಸ್ವಂತ ಸೈಟ್ ಮಾರಿ ಕಟ್ಟಿದ ‘ಪುಸ್ತಕ ಮನೆ’
ಶಾಲಾ ದಿನಗಳಲ್ಲಿ ಗ್ರಂಥಾಲಯದಿಂದ ಪುಸ್ತಕಗಳನ್ನು ಮನೆಗೆ ಕೊಂಡೊಯ್ಯಲು ಅನುಮತಿ ಸಿಗದಿದ್ದಾಗ, ತಾವೇ ಸ್ವತಃ ಪುಸ್ತಕ ಕೊಳ್ಳುವ ಸಂಕಲ್ಪ ಮಾಡಿದ್ದರು. ಅಂದಿನಿಂದ ಆರಂಭವಾದ ಇವರ ಪುಸ್ತಕ ಸಂಗ್ರಹದ ಹುಚ್ಚು ಇಡೀ ಜೀವನದ ಕಾಯಕವಾಯಿತು. ತಮ್ಮ ಸಂಬಳದ ಬಹುಭಾಗ, ನಿವೃತ್ತಿಯ ಹಣವನ್ನೆಲ್ಲ ಕೇವಲ ಪುಸ್ತಕಗಳ ಖರೀದಿಗೇ ವಿನಿಯೋಗಿಸಿದರು. ಒಂದು ಹಂತದಲ್ಲಿ ಪುಸ್ತಕಗಳನ್ನು ಕೊಳ್ಳಲು ಹಣವಿಲ್ಲದಿದ್ದಾಗ ತಮ್ಮ ಸ್ವಂತ ಸೈಟ್ ಮಾರಾಟ ಮಾಡಿದ್ದರು ಎಂದರೆ ಇವರ ಅಕ್ಷರ ಪ್ರೀತಿ ಎಷ್ಟಿತ್ತೆಂದು ಊಹಿಸಬಹುದು.

ಇಂದು ಮಂಡ್ಯದ ಹರಳಹಳ್ಳಿಯಲ್ಲಿರುವ ಇವರ ‘ಪುಸ್ತಕ ಮನೆ’ ಗ್ರಂಥಾಲಯದಲ್ಲಿ ಕನ್ನಡ ಸೇರಿದಂತೆ 22ಕ್ಕೂ ಹೆಚ್ಚು ಭಾಷೆಗಳ 20 ರಿಂದ 29 ಲಕ್ಷಕ್ಕೂ ಅಧಿಕ ಪುಸ್ತಕಗಳು, ಹಳೆಯ ನಿಯತಕಾಲಿಕೆಗಳು, ಅಪರೂಪದ ಹಸ್ತಪ್ರತಿಗಳು ಹಾಗೂ ನಾಣ್ಯಗಳ ಬೃಹತ್ ಸಂಗ್ರಹವಿದೆ. ಇದು ಭಾರತದ ಅತಿ ದೊಡ್ಡ ಖಾಸಗಿ ಗ್ರಂಥಾಲಯಗಳಲ್ಲಿ ಒಂದಾಗಿದ್ದು, ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲೂ ದಾಖಲಾಗಿದೆ.

ಉಚಿತ ಜ್ಞಾನದಾಸೋಹಕ್ಕೆ ಒಲಿದ ಗೌರವ
ಅಂಕೇಗೌಡರ ಈ ‘ಪುಸ್ತಕ ಮನೆ’ಗೆ ಬರುವ ಯಾವುದೇ ವಿದ್ಯಾರ್ಥಿ, ಸಂಶೋಧಕ ಅಥವಾ ಸಾರ್ವಜನಿಕರಿಗೆ ಯಾವುದೇ ಶುಲ್ಕವಿಲ್ಲದೆ ಉಚಿತವಾಗಿ ಓದಲು ಅವಕಾಶ ಕಲ್ಪಿಸಲಾಗಿದೆ. ಇವರ ಈ ನಿಸ್ವಾರ್ಥ ಕಾಯಕಕ್ಕೆ ನೆರವಾಗಲು ಉದ್ಯಮಿ ಹರಿ ಕೋಡೆ ಗ್ರಂಥಾಲಯಕ್ಕೆ ಅಗತ್ಯವಿದ್ದ ಸುಂದರವಾದ ಕಟ್ಟಡವನ್ನು ನಿರ್ಮಿಸಿಕೊಟ್ಟಿದ್ದಾರೆ.

ಯಾವುದೇ ಪ್ರಚಾರ ಬಯಸದೆ ಕರ್ನಾಟಕದ ಗ್ರಾಮೀಣ ಭಾಗದಲ್ಲಿ ಅಕ್ಷರ ಕ್ರಾಂತಿ ಮಾಡಿದ ಈ 74 ವರ್ಷದ ಈ ಜೀವಕ್ಕೆ ಇಂದು ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ಲಭಿಸಿರುವುದು ಇಡೀ ಕನ್ನಡ ನಾಡಿಗೆ ಹೆಮ್ಮೆಯ ವಿಷಯವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !