ಹೊಸ ದಿಗಂತ ವರದಿ, ಮಡಿಕೇರಿ:
ದಕ್ಷಿಣ ಕೊಡಗಿನಿಂದ ಕೇರಳಕ್ಕೆ ಅಕ್ರಮವಾಗಿ ಬೀಟೆ ಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದ ಪ್ರಕರಣವನ್ನು ವೀರಾಜಪೇಟೆ ಸಿ.ಐ.ಡಿ ಪೊಲೀಸ್ ಅರಣ್ಯ ಸಂಚಾರಿದಳದ ಸಿಬ್ಬಂದಿಗಳು ಪತ್ತೆಹಚ್ಚಿ,6ಲಕ್ಷ ರೂ.ಮೌಲ್ಯದ ಪಿಕ್ ಅಪ್ ವಾಹನ ಮತ್ತು,3.5ಲಕ್ಷ ಮೌಲ್ಯದ ಬೀಟೆ ಮರವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಸೋಮವಾರ ಸಂಜೆ 4.30 ಗಂಟೆಗೆ ಈಚೂರು ಗ್ರಾಮದ ಕಡೆಯಿಂದ ಕೇರಳದ ಕಡೆಗೆ ಕೇರಳ ನೋಂದಣಿಯ ಬೊಲೆರೋ ಮಹೇಂದ್ರ ಪಿಕ್ ಅಪ್ ವಾಹನದಲ್ಲಿ 5 ಬೀಟೆ ಮರದ ದಿಮ್ಮಿಗಳನ್ನು ಅಕ್ರಮವಾಗಿ ತುಂಬಿಸಿಕೊಂಡು ಕೇರಳ ರಾಜ್ಯದ ಕೊಚ್ಚಿ ಕಡೆಗೆ ಹೋಗುತ್ತಿರುವುದಾಗಿ ಖಚಿತ ಮಾಹಿತಿ ದೊರಕಿತ್ತು.
ಅದರ ಮೇರೆಗೆ ವೀರಾಜಪೇಟೆ ಸಿ.ಐ.ಡಿ ಪೊಲೀಸ್ ಅರಣ್ಯ ಸಂಚಾರಿ ದಳದ ಸಿಬ್ಬಂದಿಗಳು ದಾಳಿ ನಡೆಸಿ ಪಿಕ್ ಅಪ್ ವಾಹನ ಬೀಟೆ ಮರವನ್ನು ವಶಕ್ಕೆ ಪಡೆದುಕೊಂಡಿದ್ದು, ಕೇರಳದ ಮಲಪ್ಪುರಂ ಜಿಲ್ಲೆಯ ಎ.ಕೆ.ರಾಜು ಎಂಬಾತನನ್ನು ಬಂಧಿಸಿ ಅರಣ್ಯ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಪೊಲೀಸ್ ಮಹಾ ನಿರೀಕ್ಷಕ ಕೆ.ವಿ.ಶರತ್ ಚಂದ್ರ ಅವರ ನಿರ್ದೇಶನದ ಮೇರೆಗೆ ಸಿ.ಐ.ಡಿ ಪೊಲೀಸ್ ಅರಣ್ಯ ಸಂಚಾರಿ ದಳದ ಆರಕ್ಷಕ ಉಪನಿರೀಕ್ಷಕ ವೀಣಾನಾಯಕ್, ಸಿಬ್ಬಂದಿಗಳಾದ ಟಿ.ಪಿ. ಮಂಜುನಾಥ್, ಕೆ.ಎಸ್. ದೇವಯ್ಯ, ಸಿ.ಬಿ.ಬೀನಾ, ಎಸ್.ಎಂ.ಯೋಗೇಶ್, ಪಿ.ಯು ಮುನೀರ್, ಆರ್. ನಂದ ಕುಮಾರ್ ಅವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.