ಹೊಸದಿಗಂತ ಡಿಜಿಟಲ್ ಡೆಸ್ಕ್
ಕೇರಳದ ಸಂಸ್ಕೃತಿ, ಭಕ್ತಿಶ್ರದ್ಧೆ ಹಾಗೂ ಉತ್ಸವಗಳ ರಾಯಭಾರಿಯಂತಿದ್ದ ಎರಟ್ಟುಪೆಟ್ಟಾ ಅಯ್ಯಪ್ಪನ್ ಆನೆ ತೀಕೋಯಿಯಲ್ಲಿ ಇಹಲೋಕ ತ್ಯಜಿಸಿದೆ.
ಕಳೆದ ಕೆಲವು ತಿಂಗಳುಗಳಿಂದ ಅನಾರೋಗ್ಯಕ್ಕೊಳಗಾಗಿದ್ದ ೫೫ ವರ್ಷ ಪ್ರಾಯದ ಈ ಆನೆಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಈ ನಡುವೆ ಆನೆ ಮೂರು ಬಾರಿ ಕುಸಿದು ಬಿದ್ದಿದ್ದು, ಅದಾದ ಬಳಿಕ ಎದ್ದು ನಿಲ್ಲಲಾಗದ ಸ್ಥಿತಿ ಉಂಟಾಗಿತ್ತು. ಆನೆಯ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಕೇರಳದ ಅನೇಕ ದೇವಾಲಯ ಸಮಿತಿಗಳು, ಅಭಿಮಾನಿಗಳು ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ಅಂತಿಮ ದರ್ಶನಕ್ಕಾಗಿ ನೂರಾರು ಜನರು ತೀಕೋಯಿಗೆ ಆಗಮಿಸಿದ್ದಾರೆ.
ಕೊಟ್ಟಾಯಂ ಜಿಲ್ಲೆಯ ಎರಟ್ಟುಪೆಟ್ಟಾ ಬಳಿಯ ತೀಕೋಯಿ ಪ್ರದೇಶದ ಪರವನ್ ಪರಂಪಿಲ್ ಮನೆತನದ ಮಾಲೀಕತ್ವದ ಆನೆಯಾಗಿದ್ದ ಅಯ್ಯಪ್ಪನ್, ನೂರಾರು ದೇವಸ್ಥಾನ ಉತ್ಸವಗಳಲ್ಲಿ ಭಾಗವಹಿಸಿದೆ. ಭವ್ಯ ಶರೀರ, ಶಿಸ್ತುಗಳಿಂದ ಇದು ಅಪಾರ ಮಂದಿಯ ಹೃದಯಗೆದ್ದಿತ್ತು.
ಹಲವು ಬಿರುದುಗಳ ಸರದಾರ
1977ಡಿಸೆಂಬರ್ 14ರಂದು ಕೊಡನಾಡಿನಲ್ಲಿ ಅರಣ್ಯ ಇಲಾಖೆಯ ಕೇಂದ್ರೀಯ ಶಿಬಿರದಿಂದ ಹರಾಜಿನಲ್ಲಿ ಇದನ್ನು ಖರೀದಿಸಲಾಗಿತ್ತು. ವೇಳ್ಲುಕುನ್ನೆಲ್ ಪರವನ್ ಪರಂಪಿಲ್ ಮನೆತನದಲ್ಲಿ ಸಾಕಲ್ಪಟ್ಟ ಈ ಆನೆಗೆ ಅಯ್ಯಪ್ಪನ್ ಗಜರಾಜನ್, ಗಜೋತ್ತಮನ್, ಗಜರತ್ನಂ, ಕಲಭಕೇಸರಿ, ಟ್ರಾವಂಕೂರ್ ಗಜಶ್ರೇಷ್ಠನ್, ಐರಾವತಸಮನ್ ಎಂಬ ಗೌರವದ ಬಿರುದುಗಳು ದೊರಕಿದ್ದವು.