ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತ 0–2 ಅಂತರದಲ್ಲಿ ಸೋಲಿನ ಕಹಿ ಅನುಭವಿಸಿದ ಬಳಿಕ ಟೀಮ್ ಇಂಡಿಯಾ ಹೆಡ್ ಕೋಚ್ ಗೌತಮ್ ಗಂಭೀರ್ ವಿರುದ್ಧ ತೀವ್ರ ಟೀಕೆಗಳು ಕೇಳಿಬಂದಿದ್ದವು. ಈ ಹಿನ್ನೆಲೆ ಗಂಭೀರ್ ಅವರನ್ನು ಟೆಸ್ಟ್ ತಂಡದ ಕೋಚ್ ಸ್ಥಾನದಿಂದ ತೆರವುಗೊಳಿಸಲಾಗುತ್ತದೆ ಎಂಬ ಊಹಾಪೋಹಗಳು ಹರಿದಾಡುತ್ತಿದ್ದವು. ಆದರೆ ಈ ಎಲ್ಲ ವರದಿಗಳಿಗೆ ಬಿಸಿಸಿಐ ಇದೀಗ ಸ್ಪಷ್ಟ ವಿರಾಮ ಹಾಕಿದೆ.
ಭಾರತ ತಂಡದ ಹೆಡ್ ಕೋಚ್ ಸ್ಥಾನದಿಂದ ಗೌತಮ್ ಗಂಭೀರ್ ಅವರನ್ನು ತೆಗೆದುಹಾಕುವ ಯಾವುದೇ ನಿರ್ಧಾರ ಸದ್ಯಕ್ಕೆ ಇಲ್ಲ ಎಂದು ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಖಚಿತಪಡಿಸಿದ್ದಾರೆ. ಗಂಭೀರ್ ಬದಲಿಗೆ ವಿವಿಎಸ್ ಲಕ್ಷ್ಮಣ್ ಅವರನ್ನು ಸಂಪರ್ಕಿಸಲಾಗಿದೆ ಎಂಬ ಸುದ್ದಿಗಳಲ್ಲೂ ಸತ್ಯಾಂಶವಿಲ್ಲ ಎಂದು ಅವರು ಹೇಳಿದ್ದಾರೆ. ಇಂತಹ ವದಂತಿಗಳನ್ನು ಸಂಪೂರ್ಣವಾಗಿ ತಳ್ಳಿ ಹಾಕಿರುವ ಬಿಸಿಸಿಐ, ಗಂಭೀರ್ ಮೇಲಿನ ವಿಶ್ವಾಸ ಮುಂದುವರಿದಿದೆ ಎಂದು ಸ್ಪಷ್ಟ ಸಂದೇಶ ನೀಡಿದೆ.
ಟೆಸ್ಟ್ ಸರಣಿ ಸೋಲಿನ ನಂತರ ತರಬೇತಿ ಶೈಲಿಯ ಕುರಿತು ಪ್ರಶ್ನೆಗಳು ಸಹಜವಾಗಿಯೇ ಉದ್ಭವಿಸಿದ್ದರೂ, ಆಡಳಿತ ಮಂಡಳಿ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ತಿಳಿಸಲಾಗಿದೆ. ಜನರ ಅಭಿಪ್ರಾಯಗಳು ಬೇರೆ ಇರಬಹುದು, ಆದರೆ ಬಿಸಿಸಿಐ ಗಂಭೀರ್ ಅವರ ಕಾರ್ಯವೈಖರಿಯಿಂದ ತೃಪ್ತಿಯಲ್ಲಿದೆ ಎಂಬುದು ಸ್ಪಷ್ಟವಾಗಿದೆ.
2024ರ ಟಿ20 ವಿಶ್ವಕಪ್ ಬಳಿಕ ಗಂಭೀರ್ ಹೆಡ್ ಕೋಚ್ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಸೀಮಿತ ಓವರ್ ಕ್ರಿಕೆಟ್ನಲ್ಲಿ ಭಾರತ ಉತ್ತಮ ಪ್ರದರ್ಶನ ನೀಡಿದೆ. ಟೆಸ್ಟ್ ಮಾದರಿಯಲ್ಲಿ ಮಾತ್ರ ಸವಾಲುಗಳು ಎದುರಾಗಿದ್ದು, ಮುಂದಿನ ದಿನಗಳಲ್ಲಿ ತಂಡ ಅದನ್ನು ಸರಿಪಡಿಸಿಕೊಳ್ಳಲಿದೆ ಎಂದು ಬಿಸಿಸಿಐ ವಿಶ್ವಾಸ ವ್ಯಕ್ತಪಡಿಸಿದೆ.

