ಶಿವನ ದರುಶನ ಮಾಡಿದರೆ ಜ್ಞಾನ, ಆರೋಗ್ಯ ವೃದ್ಧಿ: ಗಣಪತಿ ಸಚ್ಚಿದಾನಂದ ಸ್ವಾಮಿ

ಹೊಸದಿಗಂತ ವರದಿ,ಮೈಸೂರು:

ಮಹಾಶಿವರಾತ್ರಿಯಂದು ಶಿವನ ದರುಶನ ಮಾಡಿದರೆ ಜ್ಞಾನ, ಆರೋಗ್ಯ ಶುಭ, ಕ್ಷೇಮ ಸಿಗಲಿದೆ ಎಂದು ಮೈಸೂರಿನ ಅವಧೂತ ದತ್ತ ಪೀಠದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮಿ ತಿಳಿಸಿದರು.

ಶುಕ್ರವಾರ ಮಹಾಶಿವರಾತ್ರಿ ಪ್ರಯುಕ್ತ ಗಣಪತಿ ಸಚ್ಚಿದಾನಂದ ಆಶ್ರಮದ ಆವರಣದಲ್ಲಿರುವ ಸಚ್ಚಿದಾನಂದೇಶ್ವರ ಶಿವಲಿಂಗಕ್ಕೆ ವಿಶೇಷ ಅಭಿಷೇಕ ಪೂಜೆ ನೆರವೇರಿಸಿ, ನಾಡಿನ ಜನರಿಗೆ ಆಶೀರ್ವಚನ ನೀಡಿ ಮಾತನಾಡಿದ ಅವರು.ಸೂರ್ಯನನ್ನ ನೋಡಿದರೆ ಆರೋಗ್ಯ ಸಿಗುತ್ತದೆ ಎಂದು ಹೇಳಲಾಗುತ್ತದೆ. ಹೋಮದ ಯಜ್ಞದ ಅಗ್ನಿಯನ್ನು ನೋಡಿದರೆ ಐಶ್ವರ್ಯ ಸಿಗುತ್ತದೆ. ಹಾಗೆಯೇ ಶಿವನ ದರ್ಶನ ಮಾಡಿದರೆ ಜ್ಞಾನ, ಆರೋಗ್ಯ, ಎಲ್ಲವೂ ಸಿಗುತ್ತದೆ ಎಂದು ಹೇಳುತ್ತಾರೆ. ಶಿವ ಮಂತ್ರ ಬಹಳ ಮುಖ್ಯ, ಶ್ರೀರಾಮಚಂದ್ರ ಕೂಡ ಶಿವ ಮಂತ್ರವನ್ನು ಜಪಿಸುತ್ತಿದ್ದರು. ಹಾಗೆಯೇ ಶಿವ ಕೂಡ ರಾಮ ಮಂತ್ರವನ್ನು ಜಪಿಸುತ್ತಾರೆ. ಕಾಶಿಯಲ್ಲಿ ಮರಣ ಅಪ್ಪಿದರೆ ಆ ಶಿವನೇ ಬಂದು ಕಿವಿಯಲ್ಲಿ ರಾಮಮಂತ್ರ ಉಪದೇಶ ಮಾಡುತ್ತಾರೆ ಎಂಬ ನಂಬಿಕೆ ಇದೆ ಎಂದು ಹೇಳಿದರು.

ಶಿವ- ಕೇಶವ ಇಬ್ಬರೂ ಒಂದೇ, ಶಿವರಾತ್ರಿಯ ದಿನ ಉತ್ತರ ಭಾಗಗಳಲ್ಲಿ ವಿಷ್ಣುವಿನ ದೇವಾಲಯಕ್ಕೆ ಭಕ್ತರು ಹೋಗುವ ಪದ್ಧತಿ ಇದೆ, ಶಿವನಿಗೆ ಗಂಗೆ ಅತಿಪ್ರಿಯ. ಅಭಿಷೇಕ ಪ್ರಿಯ. ಅವನಿಗೆ ಅಭಿಷೇಕ ಮಾಡಿ, ನಾಮ ಸ್ಮರಣೆ ಮಾಡಿದರೆ ಸಾಕು ನಮಗೆ ಎಲ್ಲ ಫಲ ದೊರೆಯುತ್ತದೆ ಎಂದು ಹೇಳಿದರು.

ಶಿವನಿಗೆ ರೂಪವಿಲ್ಲ. ಹಾಗಾಗಿ ಬಿಂದು ಕಲ್ಲಿನಲ್ಲೂ ಕೂಡ ಶಿವನನ್ನು ನಾವು ಕಾಣುತ್ತೇವೆ. ಈ ಶಿವರಾತ್ರಿಯ ದಿನ ಅವನ ಧ್ಯಾನ ಮಾಡಿದರೆ ಶಿವನಾಮ ಸ್ಮರಣೆ ಮಾಡಿದರೆ, ಅವರ ಜೀವನ ಚೆನ್ನಾಗಿರುತ್ತದೆ ಎಂದು ತಿಳಿಸಿದರು.

ಇನ್ನೇನು ಯುಗಾದಿ ಆಗಮಿಸುತ್ತಿದೆ. ಈಗ ಬರುವುದು ಕ್ರೋಧಿ ನಾಮ ಸಂವತ್ಸರ. ಹೆಸರೇ ಕ್ರೋಧಿ, ಹಾಗಾಗಿ ಕಷ್ಟಗಳು ಇದ್ದೇ ಇರುತ್ತದೆ. ಮಳೆ -ಬೆಳೆ ಕಡಿಮೆ ಇರುತ್ತದೆ. ಈ ಎಲ್ಲ ಕಷ್ಟಗಳು ದೂರವಾಗಬೇಕಾದರೆ, ನಾವೆಲ್ಲರೂ ಸದಾ ಶಿವ ಸ್ಮರಣೆ ಮಾಡಬೇಕು. ಅವನ ಆರಾಧನೆಯನ್ನು ಮಾಡಬೇಕು, ಆಗ ಎಲ್ಲ ಕಷ್ಟಗಳು ದೂರವಾಗುತ್ತದೆ ಎಂದು ತಿಳಿಸಿದರು.
ನಾವೆಲ್ಲ ಜಾಗರಣೆ ಮಾಡಿ ಶಿವನನ್ನು ಸ್ಮರಿಸಿ ಇಂದ್ರಿಯಗಳನ್ನು ಎಚ್ಚರವಾಗಿಟ್ಟುಕೊಳ್ಳಬೇಕು. ಕ್ರೋಧಿ ನಾಮ ಸಂವತ್ಸರಕ್ಕಾಗಿ ಯಾರು ಭಯಪಡುವುದು ಬೇಕಿಲ್ಲ. ಶಿವನಿಗೆ ಅಭಿಷೇಕ ಮಾಡಿ, ಇಡೀ ದಿನ ಅವನನ್ನು ಧ್ಯಾನ ಮಾಡಿದರೆ ಉತ್ತಮ ಫಲ ಸಿಗುತ್ತದೆ. ಪ್ರಜಾಪ್ರತಿನಿಧಿಗಳಿಗೆ ರಾಜಕೀಯದವರಿಗೆ ಹಾಗೂ ಎಲ್ಲಾ ರಂಗದವರಿಗೂ ಮಹಾಶಿವ ಒಳ್ಳೆಯದನ್ನೇ ಮಾಡುತ್ತಾನೆ ಎಂದು ಶ್ರೀಗಳು ನುಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!