ಹೊಸ ದಿಗಂತ ವರದಿ, ಚಿಕ್ಕಮಗಳೂರು:
ಸಮವಸ್ತ್ರ ಇಲ್ಲ ಎನ್ನುವ ಕಾರಣಕ್ಕೆ ಮನನೊಂದ ಶಾಲಾ ವಿದ್ಯಾರ್ಥಿನಿಯೋರ್ವಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತರೀಕೆರೆ ತಾಲ್ಲೂಕು ಲಿಂಗದಹಳ್ಳಿಯ ಸಹ್ಯಾದ್ರಿಪುರದಲ್ಲಿ ನಡೆದಿದೆ.
ನಂದಿತಾ (೧೩) ಎಂಬಾಕೆ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿಯಾಗಿದ್ದು, ಸಮವಸ್ತ್ರ ಧರಿಸಿ ಬರುವಂತೆ ಶಾಲೆಯಲ್ಲಿ ಶಿಕ್ಷಕರು ಸೂಚಿಸಿದ್ದರು. ಎರಡು ವರ್ಷ ಶಾಲೆ ಬಿಟ್ಟಿದ್ದ ವಿದ್ಯಾರ್ಥಿನಿ ಬಳಿ ಹಳೇಯ ಸಮವಸ್ತ್ರವೂ ಇರಲಿಲ್ಲ. ಮನೆಗೆ ಬಂದು ಪೋಷಕರ ಬಳಿ ಯೂನಿಫಾರಂ ಕೇಳಿದ್ದಳು ಎನ್ನಲಾಗಿದೆ.
ಮುಂದಿನ ಎರಡು ದಿನದಲ್ಲಿ ಸಿಗುತ್ತದೆ ಎಂದು ತಂದೆ ತಿಳಿಸಿದ್ದರು. ಇದರಿಂದ ಮನನೊಂದು ಆಕೆ ವಿಷ ಸೇವಿಸಿದ್ದಾಳೆ.
ಕೂಡಲೇ ಆಸ್ಪತ್ರೆಗೆ ದಾಖಲಿಸಿದರೂ ಆಕೆ ಮೃತಪಟ್ಟಿದ್ದಾಳೆ. ಲಿಂಗದಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.