ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ, ತನ್ನ ಆರೋಗ್ಯದ ಬಗ್ಗೆ ಕಾಂಗ್ರೆಸ್ ನಾಯಕರು ಮಾಡುತ್ತಿರುವ ಟೀಕೆಗಳಿಗೆ ತಿರುಗೇಟು ನೀಡಿದ್ದಾರೆ. “ನನಗೆ ಭಗವಂತ ಆಯಸ್ಸು ಕೊಟ್ಟಿರೋದು ನನ್ನ ಜೀವನಕ್ಕಾಗಿ ಅಲ್ಲ, ಈ ನಾಡಿನ ಜನತೆಗೆ ಏನಾದರೂ ಒಳ್ಳೆಯದು ಮಾಡಬೇಕೆಂಬ ಕನಸಿಗಾಗಿ” ಎಂದು ಅವರು ಹೇಳಿದ್ದಾರೆ.
ಜಿಲ್ಲಾ ಮಟ್ಟದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ವರ್ಷಗಳಲ್ಲಿ ಎರಡು ಶಸ್ತ್ರಚಿಕಿತ್ಸೆ, ಒಂದು ಬಾರಿ ಸ್ಟ್ರೋಕ್ ಅನುಭವಿಸಿದ್ದರೂ, ತಾನು ಸಂಪೂರ್ಣ ಗಟ್ಟಿಯಾಗಿದ್ದೇನೆ ಎಂದು ಹೆಚ್ಡಿಕೆ ಸ್ಪಷ್ಟಪಡಿಸಿದರು. “ಕಾಂಗ್ರೆಸ್ ನಾಯಕರು ನನ್ನ ಆರೋಗ್ಯದ ಮೇಲೆ ಟೀಕೆ ಮಾಡಿ ಜೆಡಿಎಸ್ ಪಕ್ಷ ಮುಗೀತು ಅಂತಾರೆ. ನಾನು ಗಟ್ಟಿಯಾಗಿದ್ದೇನೆ, ಯಾರೂ ಆತಂಕ ಪಡಬೇಡಿ,” ಎಂದರು.
ಕಾಂಗ್ರೆಸ್ ನಾಯಕರು ರಾಜ್ಯದ ಬೆಳವಣಿಗೆ ಬಗ್ಗೆ ದೊಡ್ಡ ಮಾತುಗಳನ್ನು ಆಡುತ್ತಿದ್ದರೂ, ನೆನೆಸಿಕೊಳ್ಳುವಷ್ಟು ಪರಿಣಾಮಕಾರಿಯಾದ ಕೆಲಸಗಳು ನಡೆಯುತ್ತಿಲ್ಲ ಎಂಬ ಆರೋಪವನ್ನು ಕುಮಾರಸ್ವಾಮಿ ಮಾಡಿದ್ದಾರೆ. “ಕಲ್ಯಾಣ ಕರ್ನಾಟಕವನ್ನು ಬೆಳಸುತ್ತೇವೆ ಅಂತಾ ಹೇಳೋ ಮುನ್ನ, ಕುಡಿಯುವ ನೀರಿಗೆ ನಿರ್ವಹಣೆ ಕೊಡೋದೆ ಮುಖ್ಯ,” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ರನ್ನು ಉದ್ದೇಶಿಸಿ ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯ, ಶಿವಕುಮಾರ್ ಮನೆಗಳ ಬಳಿ ಬಡವರು ಹೋಗೋಕೆ ಸಾಧ್ಯವೇ? ಅವರ ಹೃದಯ ವೈಶಾಲ್ಯ ಎಲ್ಲಿ? ಜನರ ಪಕ್ಷವೇ ಜೆಡಿಎಸ್. ಗೆದ್ದಾಗ ಹಿಗ್ಗದ, ಸೋತಾಗ ಕುಗ್ಗದ ಪಕ್ಷ. ನಾವು ಬಡವರ ಪಕ್ಷ ಎಂದು ಅವರು ಉತ್ಸಾಹದಿಂದ ಹೇಳಿದರು.