ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಭಾರತದಿಂದ ಏನಾದರೂ ಸಮಸ್ಯೆ ಎದುರಾದರೆ ನಾವು ಕೋಲ್ಕತ್ತಾದ ಮೇಲೆ ದಾಳಿ ನಡೆಸುವ ಮೂಲಕ ಉತ್ತರಿಸುತ್ತೇವೆ ಎಂದು ಉದ್ಧಟತನದ ಹೇಳಿಕೆ ನೀಡಿದ್ದ ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಹೇಳಿಕೆಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಖಡಕ್ ಎಚ್ಚರಿಕೆ ನೀಡಿದ್ದು, ಬಂಗಾಳದ ಮೇಲೆ ಕಣ್ಣಿಟ್ಟರೆ ಪಾಕಿಸ್ತಾನ ಈ ಬಾರಿ ಎಷ್ಟು ಭಾಗಗಳಾಗಿ ವಿಭಜನೆಯಾಗುತ್ತದೆ ಎಂದು ದೇವರೇ ಬಲ್ಲ ಎಂದು ತಿರುಗೇಟು ನೀಡಿದ್ದಾರೆ.
ಬಂಗಾಳದಲ್ಲಿ ನಡೆದ ಸಾರ್ವಜನಿಕ ರ್ಯಾಲಿಯಲ್ಲಿ ಮಾತನಾಡಿದ ರಾಜನಾಥ್ ಸಿಂಗ್, 1971 ಸಮಯದಲ್ಲಿ ಪಾಕಿಸ್ತಾನ ಎರಡು ಭಾಗಗಳಾದಾಗ ಅದರ ಪರಿಣಾಮಗಳನ್ನು ಅವರು ಅನುಭವಿಸಿದ್ದಾರೆ. ಮತ್ತೆ ಏನಾದರೂ ಬಂಗಾಳದ ಮೇಲೆ ಕಣ್ಣಿಡಲು ಪ್ರಯತ್ನಿಸಿದರೆ, ಈ ಬಾರಿ ಪಾಕಿಸ್ತಾನ ಎಷ್ಟು ಭಾಗಗಳಾಗಿ ವಿಭಜನೆಯಾಗುತ್ತದೆ ಎಂದು ದೇವರೇ ಬಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. 1971ರಲ್ಲಿ ಭಾರತ-ಪಾಕಿಸ್ತಾನ ಯುದ್ಧದ ಬಳಿಕ ಬಾಂಗ್ಲಾದೇಶ ಎಂಬ ಸ್ವತಂತ್ರ ರಾಷ್ಟ್ರ ರಚನೆಯಾಗಿತ್ತು.
ಇತ್ತೀಚೆಗೆ ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ , ಭಾರತ ಕಾರ್ಯಾಚರಣೆಯನ್ನು ನಡೆಸಲು ಪ್ರಯತ್ನಿಸಿದರೆ, ಕೋಲ್ಕತ್ತಾವನ್ನು ಗುರಿಯಾಗಿಸುತ್ತೇವೆ ಎಂದು ನಾಲಿಗೆ ಹರಿಬಿಟ್ಟಿದ್ದರು.



