ಹೊಸದಿಗಂತ ಡಿಜಿಟಲ್ ಡೆಸ್ಕ್:
ಯುಕೆಪಿ ಯೋಜನೆಯಿಂದ ಮುಳುಗಡೆಗೊಂಡ ಭೂಸಂತ್ರಸ್ತ ವರ್ತಕರಿಗೆ ಬಾಗಲಕೋಟೆಯಲ್ಲೇ 200 ಎಕರೆ ಪ್ರದೇಶದಲ್ಲಿ ಪುನರ್ ವಸತಿ ಕಲ್ಪಿಸಿ, ವಾಣಿಜ್ಯ ಚಟುವಟಿಕೆಗೆ ಅವಕಾಶ ಕಲ್ಪಿಸಿಕೊಡಲು ನಾವು ಸಿದ್ಧವಿದ್ದೇವೆ ಎಂದು ಡಿ.ಕೆ. ಶಿವಕುಮಾರ್ ಭರವಸೆ ನೀಡಿದರು.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಪಿ ಎಚ್ ಪೂಜಾರ್ ಅವರ ಪ್ರಶ್ನೆಗೆ ಜಲಸಂಪನ್ಮೂಲ ಸಚಿವರೂ ಆಗಿರುವ ಶಿವಕುಮಾರ್ ಅವರು ಗುರುವಾರ ಉತ್ತರಿಸಿದರು.
ಪಿ.ಹೆಚ್ ಪೂಜಾರ್ ಅವರು ಕೃಷ್ಣಾ ಮೇಲ್ದಂಡೆ ಯೋಜನೆ ಆಲಮಟ್ಟಿ ಜಲಾಶಯದಿಂದಾಗಿ ವ್ಯಾಪಾರ ಕೇಂದ್ರಗಳ ಭೂಮಿ ಕೂಡ ಮೂರನೇ ಒಂದು ಭಾಗ ಮುಳುಗಡೆಯಾಗಿದ್ದು, ಸರ್ಕಾರ ಈ ವ್ಯಾಪಾರಸ್ಥರಿಗೆ ಒಂದೇ ಕಡೆ ಪುನರ್ವಸತಿ ಕಲ್ಪಿಸಿ ವಾಣಿಜ್ಯ ಚಟುವಟಿಕೆಗೆ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಇದಕ್ಕೆ ಉತ್ತರಿಸಿದ ಡಿಸಿಎಂ ಅವರು, “ಕೃಷ್ಣ ಮೇಲ್ದಂಡೆ ಯೋಜನೆಯಲ್ಲಿ ಮುಳುಗಡೆಯಾಗಿರುವ ಬಾಗಲಕೋಟೆಯ ಸಣ್ಣ, ದೊಡ್ಡ ಹಾಗೂ ಅತಿ ದೊಡ್ಡ ಅಂಗಡಿಗಳ ಮಾಲೀಕರು ಯುನಿಟ್ 1, 2,3 ಕ್ಕೆ ವಾಣಿಜ್ಯ ಪ್ರದೇಶದಲ್ಲಿ 200 ಎಕರೆ ಭೂಮಿ ಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಈಗಾಗಲೇ ನಾವು 1635 ಎಕರೆ ಭೂಮಿಯನ್ನು ನಗರಾಭಿವೃದ್ಧಿ ಪ್ರಾಧಿಕಾರದಿಂದ ವಿನ್ಯಾಸ ಮಾಡಿ ನಕ್ಷೆಗೆ ಅನುಮತಿ ನೀಡಿದ್ದೇವೆ. ಪಟ್ಟಣ ಯೋಜನೆಯಲ್ಲಿ ಎಷ್ಟು ವಾಣಿಜ್ಯ ಹಾಗೂ ಎಷ್ಟು ವಾಸಯೋಗ್ಯ ಪ್ರದೇಶವಿರಬೇಕು ಎಂದು ನಿಗದಿ ಮಾಡಲಾಗುವುದು” ಎಂದು ತಿಳಿಸಿದರು.

