ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರು ಮಾಡಿದ ಕೇವಲ ಒಂದು ನಿಮಿಷದ ಭಾಷಣ, ವಿಧಾನಸಭೆಯಲ್ಲಿ ಭಾರಿ ಗದ್ದಲ ಮತ್ತು ಕೋಲಾಹಲಕ್ಕೆ ಕಾರಣವಾಯಿತು. ಆಡಳಿತ ಮತ್ತು ವಿರೋಧ ಪಕ್ಷಗಳ ನಡುವಿನ ಹಗ್ಗಜಗ್ಗಾಟಕ್ಕೆ ಸದನ ಸಾಕ್ಷಿಯಾಯಿತು.
ಕಲಾಪ ಆರಂಭವಾಗುತ್ತಿದ್ದಂತೆ ಧ್ವನಿ ಎತ್ತಿದ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ರಾಜ್ಯಪಾಲರಿಗೆ ಕಾಂಗ್ರೆಸ್ ಸದಸ್ಯರು ಅಗೌರವ ತೋರಿದ್ದಾರೆ ಎಂದು ಕಿಡಿಕಾರಿದರು.
“ಹಿಂದೆ ಸ್ಪೀಕರ್ ಪೀಠಕ್ಕೆ ಅಗೌರವ ತೋರಿದ್ದಾರೆಂಬ ಕಾರಣಕ್ಕೆ ನಮ್ಮ 18 ಶಾಸಕರನ್ನು ಅಮಾನತು ಮಾಡಲಾಗಿತ್ತು. ಈಗ ರಾಜ್ಯಪಾಲರನ್ನು ಅವಮಾನಿಸಿದವರ ವಿರುದ್ಧ ಯಾವ ಶಿಸ್ತುಕ್ರಮ ಕೈಗೊಳ್ಳುತ್ತೀರಿ?” ಎಂದು ಸ್ಪೀಕರ್ ರೂಲಿಂಗ್ಗೆ ಆಗ್ರಹಿಸಿದರು.
ರಾಜ್ಯಪಾಲರು ವಿವೇಚನೆಯಿಂದಲೇ ಭಾಷಣ ಮಾಡಿದ್ದಾರೆ. ಸಚಿವರಾದ ಹೆಚ್.ಕೆ. ಪಾಟೀಲ್ ಅವರು ರಾಜ್ಯಪಾಲರನ್ನು ‘ಓಡಿ ಹೋದರು’ ಎಂದು ಟೀಕಿಸಿದ್ದು ಸರಿಯಲ್ಲ ಎಂದು ಅಶೋಕ್ ವಾದಿಸಿದರು.
ಬಿಜೆಪಿ ಶಾಸಕರಾದ ಅಶ್ವಥ್ ನಾರಾಯಣ್ ಮತ್ತು ಸುನೀಲ್ ಕುಮಾರ್ ಅವರು ಕೂಡ ಕಾಂಗ್ರೆಸ್ ಸದಸ್ಯರ ವಿರುದ್ಧ ಶಿಸ್ತು ಕ್ರಮಕ್ಕೆ ಒತ್ತಾಯಿಸಿದರು. ಈ ವೇಳೆ ಸುನೀಲ್ ಕುಮಾರ್ ಅವರು ಈ ಸರ್ಕಾರವನ್ನು “ಗೂಂಡಾ ಸರ್ಕಾರ” ಎಂದು ಕರೆದದ್ದು ಕಾಂಗ್ರೆಸ್ ಶಾಸಕರನ್ನು ಕೆರಳಿಸಿತು. ಇದರಿಂದಾಗಿ ಸದನದಲ್ಲಿ ಜಟಾಪಟಿ ಮತ್ತು ಗದ್ದಲದ ವಾತಾವರಣ ಉತ್ತುಂಗಕ್ಕೇರಿತು.


