ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಮತಾಂತರ ನಿಷೇಧ ಕಾನೂನನ್ನು ಹಿಂಪಡೆಯಲು ಮುಂದಾಗಿರುವ ರಾಜ್ಯ ಸರಕಾರದ ನಡೆ ಅತ್ಯಂತ ಅಪಾಯಕಾರಿಯಾದುದು. ಕಾನೂನು ವಾಪಸಾತಿ ನಿರ್ಧಾರದ ಮೂಲಕ ಕಾಂಗ್ರೆಸ್ ಬಲವಂತದ ಮತಾಂತರಕ್ಕೆ ಪ್ರೇರಣೆ ನೀಡಿದಂತಾಗಿದೆ. ಸಮಸ್ತ ಹಿಂದೂ ಸಮಾಜ ಸರಕಾರದ ಧೋರಣೆಯನ್ನು ಖಂಡಿಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಪ್ರಕೋಷ್ಠಗಳ ಸಂಚಾಲಕ ಸಂದೇಶ್ ಶೆಟ್ಟಿ ರಾಜ್ಯ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ತನ್ನ ಅಧಿಕಾರದ ಆರಂಭದಲ್ಲಿಯೇ ತನ್ನ ತುಷ್ಟೀಕರಣ ನೀತಿಯನ್ನು ಮುಂದುವರಿಸಿದೆ. ರಾಜ್ಯದ ಇತರೆ ಸಚಿವರುಗಳು ಕೂಡ ಮುಖ್ಯಮಂತ್ರಿಗಳ ಹಿಂದೂ ವಿರೋಧಿ ನಡೆಯ ವಿರುದ್ಧ ಸೊಲ್ಲೆತ್ತುತ್ತಿಲ್ಲ. ಅವರೂ ಕೂಡ ಇದಕ್ಕೆ ಕುಮ್ಮಕ್ಕು ನೀಡುವಂತಿದೆ. ರಾಜ್ಯವನ್ನು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಸಬೇಕಾದ ಸರಕಾರ ರಾಜ್ಯದಲ್ಲಿ ಅರಾಜಕತೆ ನಿರ್ಮಾಣ ಮಾಡಲು ಹೊರಟಿರುವುದು ದುರದೃಷ್ಟಕರ. ಅಲ್ಪಸಂಖ್ಯಾತರ ಓಲೈಕೆಗಾಗಿ ಮತಾಂತರ ನಿಷೇಧ ಕಾನೂನನ್ನು ಹಿಂಪಡೆಯಲು ಮುಂದಾಗಿರುವುದು ಸ್ಪಷ್ಟವಾಗಿದೆ. ಆರಂಭದಲ್ಲಿಯೇ ಈ ಸರಕಾರ ಹಿಂದೂಗಳನ್ನೇ ಟಾರ್ಗೆಟ್ ಮಾಡುತ್ತಿರುವ ಲಕ್ಷಣಗಳು ಗೋಚರಿಸುತ್ತಿವೆ. ಆದ್ದರಿಂದ ನಾಗರೀಕ ಸಮಾಜ ಒಕ್ಕೊರಳಿನಿಂದ ಸರಕಾರದ ಧ್ವಂದ್ವ ನೀತಿಯ ವಿರುದ್ಧ ಧ್ವನಿ ಎತ್ತಬೇಕು ಎಂದವರು ಹೇಳಿದ್ದಾರೆ.
ಕಾಂಗ್ರೆಸ್ ಸರಕಾರ ಉಚಿತ ಯೋಜನೆಗಳ ಘೋಷಣೆಗಳ ಮೂಲಕ ಜನತೆಯನ್ನು ದಾರಿ ತಪ್ಪಿಸುತ್ತಿದೆ. ಜನತೆ ಉಚಿತ ಯೋಜನೆಗಳ ಹಿಂದೆ ಬೀಳುತ್ತಿದ್ದಂತೆ, ತನ್ನ ಬೇಳೆ ಬೇಯಿಸಿಕೊಳ್ಳುತ್ತಿದೆ. ಮತಾಂತರ ನಿಷೇಧ ಕಾನೂನು ವಾಪಸಾತಿ, ಮರು ಪಠ್ಯ ಪರಿಷ್ಕರಣೆ ಮೂಲಕ ತನ್ನ ಕಾರ್ಯವನ್ನು ಸಾಧಿಸುತ್ತಿದೆ. ಮತಾಂತರ ನಿಷೇಧ ಕಾನೂನುನನ್ನು ವಾಪಾಸು ಪಡೆದಲ್ಲಿ ಲವ್ ಜಿಹಾದ್ನಂತಹ ಪ್ರಕರಣಗಳು ಹೆಚ್ಚಾಗಿ ರಾಜ್ಯದಲ್ಲಿ ಅಶಾಂತಿ ತಲೆದೋರುವ ಸಾಧ್ಯತೆ ಹೆಚ್ಚಿದೆ. ಆದ್ದರಿಂದ ಸರಕಾರ ತನ್ನ ನಿರ್ಧಾರವನ್ನು ಮರು ಪರಿಶೀಲಿಸಬೇಕು. ಲವ್ ಜಿಹಾದ್, ಮತಾಂತರದಂತಹ ಪ್ರಕರಣಗಳಿಗೆ ಕಡಿವಾಣ ಹಾಕುವ ಬಿಜೆಪಿ ಸರಕಾರ ಜಾರಿಗೆ ತಂದಿರುವ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ಅಧಿನಿಯಮ 2021ನ್ನು ಯಥಾವತ್ ಮುಂದುವರಿಸಬೇಕು ಎಂದು ಸಂದೇಶ್ ಶೆಟ್ಟಿ ಅವರು ಪ್ರಕಟಣೆಯ ಮೂಲಕ ರಾಜ್ಯ ಸರಕಾರವನ್ನು ಒತ್ತಾಯಿಸಿದ್ದಾರೆ.
ಸಚಿವರೂ ಸಾಥ್!
ರಾಜ್ಯದ ಇತರೆ ಸಚಿವರು ಕೂಡ ಮುಖ್ಯಮಂತ್ರಿಗಳ ಹಿಂದೂ ವಿರೋಧಿ ನಡೆಯ ವಿರುದ್ಧ ಸೊಲ್ಲೆತ್ತುತ್ತಿಲ್ಲ. ಅವರೂ ಕೂಡ ಇದಕ್ಕೆ ಕುಮ್ಮಕ್ಕು ನೀಡುವಂತಿದೆ. ರಾಜ್ಯವನ್ನು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಸಬೇಕಾದ ಸರಕಾರ ರಾಜ್ಯದಲ್ಲಿ ಅರಾಜಕತೆ ನಿರ್ಮಾಣ ಮಾಡಲು ಹೊರಟಿರುವುದು ದುರದೃಷ್ಟಕರ. ಸಮಸ್ತ ಸಮಾಜ ಇದರ ವಿರುದ್ಧ ಧ್ವನಿಯೆತ್ತಬೇಕು ಎಂದು ಸಂದೇಶ್ ಶೆಟ್ಟಿ ಆಗ್ರಹಿಸಿದರು.