ದಿಗಂತ ವರದಿ ಹುಬ್ಬಳ್ಳಿ:
ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ ಆರೋಪಿಯ ಕಾಲಿಗೆ ಗುಂಡು ಹಾರಿಸಿದ ಘಟನೆ ಭಾನುವಾರ ತಡರಾತ್ರಿ ನಗರದ ಹೊರವಲಯ ಬುದರಸಿಂಗಿ ಗ್ರಾಮದ ರಸ್ತೆಯಲ್ಲಿ ನಡೆದಿದೆ.
ಆರೋಪಿ ಅಫ್ತಾಬ್ ಕರಡಿಗುಡ್ಡ ಎಂಬಾತನ ಮೇಲೆ ಕಸಬಾಪೇಟ ಪೊಲೀಸ್ ಠಾಣೆಯ ಪಿಎಸ್ ಐ ವಿಶ್ವನಾಥ ಎಂಬುವರು ಗುಂಡು ಹಾರಿಸಿದ್ದಾರೆ. ಗಾಯಗೊಂಡ ಪೊಲೀಸ್ ಸಿಬ್ಬಂದಿ ರಾಜು ರಾಥೋಡ, ಪಾಲಯ್ಯನ್, ಹಜರತ್ ರಾಮಪುರ ಎಂಬುವರನ್ನು ನಗರದ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಸುದ್ದಿಗಾರರೊಂದಿಗೆ ಮಾಹಿತಿ ನೀಡಿದರು.
ಭಾನುವಾರ ಕಸಬಾಪೇಟ ಪೊಲೀಸ್ ಠಾಣೆ ವ್ಯಾಪ್ತಿಯ ಸದರಸೋಪಾದ ಬ್ಯಾಹಟ್ಟಿ ಪ್ಲಾಟ್ ನಲ್ಲಿ ಹಳೇ ವೈಷಮ್ಯ ಹಿನ್ನೆಲೆ ಎರಡು ಗುಂಪುಗಳ ನಡುವೆ ಜಗಳವಾಗಿದೆ. ಈ ಘಟನೆಯಲ್ಲಿ ಜಾವೋರ್ ಬೇಬಾರಿ ಎಂಬಾತನಿಗೆ ಗಂಭೀರವಾಗಿ ಗಾಯಗೊಂಡಿದ್ದಾನೆ. ಈ ಕುರಿತು ಕಸಬಾಪೇಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದೂರ, ಪ್ರತಿದೂರು ದಾಖಲಾಗಿತ್ತು ಎಂದರು.
ಪ್ರಕರಣ ದಾಖಲಿಸಿಕೊಂಡು ಪೊಲೀಸರು ಆರೋಪಿಗಳ ಶೋಧ ನಡೆಸಿದ್ದರು. ಆಗ ಆರು ಜನರನ್ನು ವಶಕ್ಕೆ ಪಡೆದಿದ್ದರು. ಪ್ರಕರಣದ ಇನ್ನೊಬ್ಬ ಆರೋಪಿ ಅಫ್ತಾಬ್ ಕರಡಿಗುಡ್ಡ ಎಂಬಾತ ಬುದರಸಿಂಗಿ ಹತ್ತಿರವಿರುವುದು ತಿಳಿದು ಬಂದಿದ್ದು, ಖಚಿತ ಮಾಹಿತಿ ಆಧರಿಸಿ ಪೊಲೀಸರು ಕಾರ್ಯಚರಣೆ ನಡೆಸಿದ್ದರು. ಆಗ ಕಾಲಿಗೆ ಗುಂಡು ಹಾರಿಸಿ ವಶಕ್ಕೆ ಪಡೆಯಲಾಗಿದ್ದು, ಗಾಯಗೊಂಡ ಆತನನ್ನು ಕಿಮ್ಸ್ ಆಸ್ಪತ್ರೆ ದಾಖಲಿಸಲಾಗಿದೆ ಎಂದು ಹೇಳಿದರು.
ಹಳೇ ದ್ವೇಷ ಕಾರಣ:
ಗ್ಯಾಂಗ್ ವಾರ ಹಳೇ ದ್ವೇಷದ ಹಿನ್ನೆಲೆ ನಡೆದಿರುವುದು ತನಿಖೆಯ ವೇಳೆ ತಿಳಿದು ಬಂದಿದೆ. ೨೦೨೨ ರಲ್ಲಿ ಅಫ್ತಾಬ್ ಕರಡಿಗುಡ್ಡನ ಸಹೋದರ ಶಾಹಬಾದ್ ಎಂಬುವರು ಜಾವೋರ್ ಎಂಬಾತನ ಜೊತೆ ಗಿರುವ ಜಾಫರ್ ಎಂಬಾತನನ್ನು ಹತ್ಯೆ ಮಾಡಿದ್ದರು. ರೌಡಿಶೀಟರ್ ಕಾನೂನಿನಡಿ ೨೦೨೪ ಮಾಚ್೯ನಲ್ಲಿ ಜಾವೋರ ಎಂಬಾತನನ್ನು ರಾಯಚೂರ ಜಿಲ್ಲೆಗೆ ಗಡಿಪಾರು ಸಹ ಮಾಡಲಾಗಿತ್ತು.ಕಾನೂನು ಉಲ್ಲಂಘಿಸಿ ಭಾನುವಾರ ಬಂದಾಗ ಈ ಘಟನೆ ನಡೆದಿದೆ. ಈ ಕುರಿತು ಪ್ರಕರಣಗಳ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಲಾಗಿದೆ ಎಂದು ತಿಳಿಸಿದರು.