ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ವಿರುದ್ಧ ಸರ್ಕಾರಿ ಜಮೀನು ಒತ್ತುವರಿ ಆರೋಪ ಪ್ರಕರಣ ಸಂಬಂಧ ಎಸ್ಐಟಿ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಆಗಸ್ಟ್ 28ಕ್ಕೆ ಹೈಕೋರ್ಟ್ ಮುಂದೂಡಿದೆ.
ಸಮಾಜ ಪರಿವರ್ತನಾ ಸಮುದಾಯದಿಂದ ಮಧ್ಯ ಪ್ರವೇಶ ಕೋರಿ ಅರ್ಜಿ ಸಲ್ಲಿಸಲಾಗಿತ್ತು. ಭಾಗಶಃ ಅರ್ಜಿ ವಿಚಾರಣೆ ನಡೆಸಿ ಅದನ್ನು ಬಿಡುಗಡೆ ಮಾಡಿದ್ರೆ ಅರ್ಜಿದಾರರ ಪರ ವಕೀಲರು ನನ್ನ ಬಗ್ಗೆ ಏನೆಂದುಕೊಳ್ಳುತ್ತಾರೆ ಎಂದು ಹೈಕೋರ್ಟ್ನ ನ್ಯಾ.ಇಎಸ್ ಇಂದಿರೇಶ್ ಪ್ರಶ್ನೆ ಮಾಡಿದರು.
ರಿಜಿಸ್ಟ್ರಿಯಿಂದ ತಪ್ಪಾಗಿರಬಹುದು, ಅರ್ಜಿ ವಿಚಾರಣೆ ನಡೆಸಲು ನಮ್ಮ ಆಕ್ಷೇಪ ಇಲ್ಲ ಅಂತಾ ಸಮಾಜ ಪರಿವರ್ತನಾ ಸಮುದಾಯದ ಪರ ವಕೀಲ ಬಸವರಾಜ್ ವಾದಿಸಿದರು.
ನ್ಯಾಯಾಂಗ ವ್ಯವಸ್ಥೆಯನ್ನ ನಾವು ಗೌರವಿಸಬೇಕು. ಕಾನೂನಿನ ಚೌಕಟ್ಟಿನಲ್ಲಿ ಕೆಲಸ ಮಾಡಬೇಕಿದೆ. ಇದು ಇನ್ನೊಂದು ಅರ್ಜಿ ಅಷ್ಟೇ ಅಂತಾ ಪೀಠ ಹೇಳಿತು.
ಈ ವೇಳೆ, ಮಧ್ಯಂತರ ಅರ್ಜಿಗೆ ಆಕ್ಷೇಪಣೆ ಸಲ್ಲಿಸೋದಾಗಿ ತಿಳಿಸಿದ ಸರ್ಕಾರದ ಪರ ವಕೀಲ ಎಜಿ ಶಶಿಕಿರಣ್ ಶೆಟ್ಟಿ ಕೋರ್ಟ್ಗೆ ಮತ್ತೊಂದು ದಿನ ಪ್ರಕರಣದ ವಿಚಾರಣೆ ನಡೆಸಲು ಮನವಿ ಮಾಡಿದರು. ಈ ಹಿನ್ನೆಲೆಯಲ್ಲಿ ಮಧ್ಯಂತರ ಆದೇಶ ವಿಸ್ತರಿಸಿ ಆಗಸ್ಟ್ 28ಕ್ಕೆ ವಿಚಾರಣೆಯನ್ನ ಹೈಕೋರ್ಟ್ ಮುಂದೂಡಿದೆ.