ಹೊಸ ದಿಗಂತ ವರದಿ, ಹಾಸನ :
ಸಂಸದ ಪ್ರಜ್ವಲ್ ರೇವಣ್ಣ ಅವರ ಮೇಲೆ ಸಿಡಿಮಿಡಿಗೊಂಡ ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರು ವೇದಿಕೆಯಲ್ಲಿಯೇ ಸುಮ್ಮನೆ ಕೂರುವಂತೆ ತಾಕೀತು ಮಾಡಿದ ಪ್ರಸಂಗ ಗುರುವಾರ ನಡೆಯಿತು.
ಬೇಲೂರು ಚನ್ನಕೇಶವಸ್ವಾಮಿ ದೇವಾಲಯ ಮುಂಭಾಗ ಆಯೋಜಿಸಿದ್ದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಎಚ್.ಡಿ.ರೇವಣ್ಣ ಕೊಬ್ಬರಿ ಬೆಂಬಲ ಬೆಲೆ ನಿಗಧಿ ವಿಚಾರದಲ್ಲಿ ಕೇಂದ್ರ ಸರ್ಕಾರದ ಸಹಕಾರದ ಬಗ್ಗೆ ಮಾತನಾಡುತ್ತಿದ್ದರು. ಈ ವೇಳೆ ಸಂಸದ ಪ್ರಜ್ವಲ್ ರೇವಣ್ಣ ಅವರು ವೇದಿಕೆಯಲ್ಲಿದ್ದ ನಾಯಕರೊಂದಿಗೆ ತಮ್ಮಷ್ಟಕ್ಕೆ ಮಾತನಾಡುತ್ತಿದ್ದರು. ಇದನ್ನು ಗಮನಿಸಿದ ರೇವಣ್ಣ ಅವರು, ದಯಮಾಡಿ ಸೈಲೆಂಟಾಗಿರಿ ಎಂದು ಸೂಚಿಸಿದರು.
ಮಾತು ಮುಂದುವರಿಸಿದ ರೇವಣ್ಣ ಅವರು, ಕೇಂದ್ರ ಸರ್ಕಾರ ಕೊಬ್ಬರಿಗೆ ಬೆಂಬಲ ಬೆಲೆ ನೀಡುವಲ್ಲಿ ಸಹಾಯ ಮಾಡಿತು. ಅದಕ್ಕಾಗಿ ನಾವು ಕೃತಜ್ಞತೆ ಸಲ್ಲಿಸಬೇಕು ಎಂದು ಹೇಳುತ್ತ ಭಾಷಣ ಮುಂದುವರಿಸಿದ್ದಾಗ ಆ ಕ್ಷಣಕ್ಕೆ ಸುಮ್ಮನಾದ ಸಂಸದ ಪ್ರಜ್ವಲ್ ಕೆಲ ಕ್ಷಣಗಳಲ್ಲೆ ಮತ್ತೆ ತಮ್ಮ ಮಾತುಕತೆ ಮುಂದುವರಿಸಿದರು. ಇದರಿಂದ ಕಿರಿಕಿರಿಗೊಳಗಾದ ರೇವಣ್ಣ, ನಾನು ಎಲ್ಲವನ್ನೂ ಹೇಳುತ್ತೇನೆ. ನನಗೆ ಗೊತ್ತಿದೆ. ನೀವು ಸುಮ್ಮನಿರಬೇಕು ಎಂದು ಸಿಟ್ಟಾದರು. ಆಗ ಪ್ರಜ್ವಲ್ ಅನಿವಾರ್ಯವಾಗಿ ಸುಮ್ಮನಾದರು.