ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರು ಚೂರಿ ಇರಿತ ಸಂಬಂಧ ಈಗ ಚೇತರಿಸಿಕೊಂಡಿದ್ದಾರೆ. ಇದೀಗ ಮೊದಲ ಬಾರಿಗೆ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಕದಿಯಲು ಮನೆಯೊಳಗೆ ನುಗ್ಗಿದ್ದ ಕಳ್ಳ ದಾಳಿ ಮಾಡಿದಾಗ ಸೈಫ್ ಅವರಿಗೆ ಹಲವು ಗಾಯಗಳು ಆಗಿದ್ದವು. ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹಾಗಿದ್ದರೂ ಕೂಡ ಆ ಕಳ್ಳನ ಬಗ್ಗೆ ಸೈಫ್ ಅಲಿ ಖಾನ್ ಅವರು ಕರುಣೆ ತೋರಿಸಿದ್ದಾರೆ.
ನನಗೆ ಅಪಾಯ ಇದೆ ಎಂದು ನಾನು ಭಾವಿಸಿಲ್ಲ. ಕಳ್ಳ ಪ್ಲ್ಯಾನ್ ಮಾಡಿ ಈ ದಾಳಿ ಮಾಡಿಲ್ಲ. ನನಗೆ ಅನಿಸಿದ ಹಾಗೆ ಆತನ ದರೋಡೆ ಪ್ರಯತ್ನ ವಿಫಲ ಆಗಿದೆ. ಆತ ಪಾಪ.. ನನಗಿಂತಲೂ ಅವನ ಜೀವನ ಹಾಳಾಗಿದೆ ಎಂದು ಸೈಫ್ ಅಲಿ ಖಾನ್ ವಿವರಿಸಿದ್ದಾರೆ.
ಸಾಮಾನ್ಯವಾಗಿ ಇಂಥ ಘಟನೆಗಳು ನಡೆದ ಬಳಿಕ ಸೆಲೆಬ್ರಿಟಿಗಳು, ಉದ್ಯಮಿಗಳು ತಮ್ಮ ರಕ್ಷಣೆಗಾಗಿ ಗನ್ ಇಟ್ಟುಕೊಳ್ಳಲು ಬಯಸುತ್ತಾರೆ. ಆದರೆ ಸೈಫ್ ಅಲಿ ಖಾನ್ ಅವರು ಗನ್ ಸಹವಾಸವೇ ಬೇಡ ಎನ್ನುತ್ತಿದ್ದಾರೆ. ಒಂದು ವೇಳೆ ಮನೆಯಲ್ಲಿ ಗನ್ ಇದ್ದರೆ ಅದನ್ನು ಮಕ್ಕಳು ಮುಟ್ಟುವ ಸಾಧ್ಯತೆ ಇರುತ್ತದೆ. ಗನ್ ಇದ್ದಲ್ಲಿ ಅಪಾಯ ಖಂಡಿತವಾಗಿಯೂ ಇರುತ್ತದೆ ಎಂಬ ಕಾರಣದಿಂದ ಸೈಫ್ ಅಲಿ ಖಾನ್ ಅವರು ಗನ್ ಇಟ್ಟುಕೊಳ್ಳುವುದಿಲ್ಲ ಎಂದಿದ್ದಾರೆ.
ಕಳ್ಳನಿಂದ ಚಾಕು ಇರಿತಕ್ಕೆ ಒಳಗಾದ ಬಳಿಕ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಸೈಫ್ ಅಲಿ ಖಾನ್ ಐದು ದಿನ ದಾಖಲಾಗಿದ್ದರು. ಅವರಿಗೆ 2 ಶಸ್ತ್ರಚಿಕಿತ್ಸೆ ಮಾಡಲಾಯಿತು. ಬೆನ್ನಿನಲ್ಲಿ ಸಿಕ್ಕಿಕೊಂಡಿದ್ದ ಚಾಕು ಚೂರನ್ನು ಹೊರಗೆ ತೆಗೆಯಲಾಯಿತು. ಕುತ್ತಿಗೆಗೂ ಸರ್ಜರಿ ಮಾಡಲಾಯಿತು.