ಹೊಸ ದಿಗಂತ ವರದಿ, ಚಿಕ್ಕಮಗಳೂರು:
ಕಳೆದೊಂದು ವಾರದಿಂದ ಬಿಡುವು ನೀಡಿದ್ದ ಮುಂಗಾರು ಮಂಗಳವಾರ ಬೆಳಗಿನಿಂದ ಮತ್ತೆ ಬಿರುಸು ಪಡೆದುಕೊಂಡಿದೆ. ಮಲೆನಾಡು ತಾಲ್ಲೂಕುಗಳಲ್ಲಿ ನಿರಂತರ ಮಳೆಯಾಗುತ್ತಿದ್ದು, ಕೆಲವಡೆ ಬಿರುಗಾಳಿ ಮಳೆಯಿಂದ ಮರಬಿದ್ದು ಅವಾಂತರ ಸೃಷ್ಠಿಯಾಗಿದೆ.
ಕೊಪ್ಪ ತಾಲೂಕಿನ ಜಯಪುರ ಸುತ್ತಮುತ್ತ ಧಾರಾಕಾರ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ವಾಹನ ಸಂಚಾರಕ್ಕೆ ತೊಡಕಾಗಿದೆ. ಈಗಾಗಲೇ ಎನ್ಆರ್ಪುರ ತಾಲ್ಲೂಕಿನಲ್ಲಿ ಮರ ಬಿದ್ದು ಇಬ್ಬರು ಮೃತ ಪಟ್ಟಿರುವ ಹಿನ್ನೆಲೆಯಲ್ಲಿ ಗಾಳಿ ಮಳೆ ಸಂದರ್ಭದಲ್ಲಿ ಜನತೆ ಹೊರಕ್ಕೆ ಬರಲು ಹೆದರುತ್ತಿದ್ದಾರೆ.
ಇಂದು ಬೆಳಗ್ಗೆ ಮಳೆ ಜೊತೆಗೆ ಬಿರುಸಾಗಿ ಗಾಳಿ ಬೀಸಿದೆ. ಪರಿಣಾಮವಾಗಿ ಕಳಸ ತಾಲ್ಲುಕಿನ ಬಸರೀಕಲ್ ಚೆಕ್ ಪೋಸ್ಟ್ ಬಳಿ ಭಾರೀ ಗಾತ್ರದ ಮರವೊಂದಿ ರಸ್ತೆಗೆ ಉರುಳಿ ಬಿದ್ದಿದೆ.
ಇದರಿಂದಾಗಿ ಕಳಸ-ಕಾರ್ಕಳ ರಾಜ್ಯ ಹೆದ್ದಾರಿ ಸಂಪೂರ್ಣ ಬಂದ್ ಆಗಿದೆ. ಎರಡೂ ಕಡೆಗಳಲ್ಲಿ ಹತ್ತಾರು ವಾಹನಗಳು ಸಿಲುಕಿಕೊಂಡು ಟ್ರಾಫಿಕ್ ಜಾಮ್ ಉಂಟಾಗಿದೆ. ಮರ ಉರುಳಿ ಬೀಳುವ ಸಂದರ್ಭದಲ್ಲಿ ಜನರು, ವಾಹನ ಸಂಚಾರ ಇಲ್ಲದಿರುವ ಕಾರಣ ಭಾರೀ ಅನಾಹುತ ತಪ್ಪಿದೆ.
ಅರಣ್ಯ ಅಧಿಕಾರಿಗಳು, ಕಳಸ ಪೊಲೀಸರು ಮರ ತೆರವುಗೊಳಿಸುವ ಕಾರ್ಯದಲ್ಲಿ ತೊಡಗಿದ್ದಾರೆ.
ಮೂಡಿಗೆರೆ, ಕೊಪ್ಪ, ಎನ್ಆರ್ಪುರ ಹಾಗೂ ಶೃಂಗೇರಿ ತಾಲ್ಲೂಕುಗಳಲ್ಲಿ ಮುಂಗಾರು ಚುರುಕಾಗಿದೆ. ಚಿಕ್ಕಮಗಳೂರು ತಾಲ್ಲೂಕಿನ ಮಲೆನಾಡು ಭಾಗದಲ್ಲಿ ಮಳೆಯಾಗುತ್ತಿದೆ. ನಗರದಲ್ಲಿ ಬೆಳಗಿನಿಂದ ಸಂಜೆ ವರೆಗೆ ಮೋಡ ಕವಿದ ವಾತಾವರಣದ ಜೊತೆಗೆ ಆಗಾಗ ಮಳೆಯಾಗುತ್ತಿದೆ.