ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡಿನ ಕರೂರು ಕಾಲ್ತುಳಿತದ ಬಳಿಕ ನಟ ವಿಜಯ್ ನೇತೃತ್ವದ ಟಿವಿಕೆ (ತಮಿಳಿಗ ವೆಟ್ರಿ ಕಳಗಂ) ಪಕ್ಷ ಮತ್ತೊಂದು ಸಮಾವೇಶಕ್ಕೆ ಸಜ್ಜಾಗಿದ್ದು, ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ.
ಸೇಲಂನಲ್ಲಿ ನಡೆಯುತ್ತಿರುವ ರ್ಯಾಲಿಗೆ ಪುದುಚೇರಿ ಪೊಲೀಸರು ಕ್ಯೂಆರ್ ಕೋಡ್ ಎಂಟ್ರಿ ಪಾಸ್ ಪರಿಚಯಿಸಿದ್ದು, ಜೊತೆಗೆ ಭಾಗವಹಿಸುವವರ ಸಂಖ್ಯೆಗೂ ಮಿತಿ ಹಾಕಿದ್ದಾರೆ.
ಫೆ. 13ರಂದು ಸೇಲಂನಲ್ಲಿ ಟಿವಿಕೆ ರ್ಯಾಲಿ ನಡೆಯಲಿದ್ದು, ಇದಕ್ಕೆ ಕೇವಲ 4,998 ಜನರಿಗೆ ಮಾತ್ರ ಅನುಮತಿ ನೀಡಲಾಗಿದ್ದು, ಸಾರ್ವಜನಿಕರ ಪ್ರವೇಶಕ್ಕೆ ಕ್ಯೂಆರ್ ಕೋಡ್ ಪಾಸ್ ಕಡ್ಡಾಯವಾಗಿದೆ.
2025ರ ಸೆಪ್ಟೆಂಬರ್ 27ರಂದು ಕರೂರಿನಲ್ಲಿ ನಡೆದ ಸಮಾವೇಶದ ಸಂದರ್ಭದಲ್ಲಿನ ಕಾಲ್ತುಳಿತದಿಂದ 41 ಜನರು ಸಾವನ್ನಪ್ಪಿದ್ದರು. ಈ ಬೆನ್ನಲ್ಲೇ ಕಳೆದ ಡಿಸೆಂಬರ್ನಲ್ಲಿ ಕೇಂದ್ರಾಡಳಿತ ಪ್ರದೇಶದಲ್ಲಿ ನಡೆದ ಟಿವಿಕೆ ರ್ಯಾಲಿಯಲ್ಲಿ ಪುದುಚೇರಿ ಪೊಲೀಸರು 5,000 ಜನರಿಗೆ ಮಾತ್ರ ಅವಕಾಶ ಕಲ್ಪಿಸಿದ್ದರು. ಅಲ್ಲದೇ ಸಮಾವೇಶದಲ್ಲಿ ಭಾಗವಹಿಸಲು ಕ್ಯೂಆರ್ ಕೋಡ್ ಪಾಸ್ ಕಡ್ಡಾಯ ಮಾಡಲಾಗಿತ್ತು. ಸಮಾವೇಶಕ್ಕೆ ಗರ್ಭಿಣಿಯರು, ಮಕ್ಕಳು ಮತ್ತು ಹಿರಿಯ ನಾಗರಿಕರಿಗೆ ಪ್ರವೇಶ ನಿರ್ಬಂಧಿಸಲಾಗಿತ್ತು. ಇದೇ ರೀತಿಯ ಕ್ರಮವನ್ನು ಇದೀಗ ಸೇಲಂನಲ್ಲಿ ಕೂಡಾ ಅನುಸರಿಸಲಾಗಿದೆ.
ನಾಳೆ ಸೇಲಂನ ಕೆವಿಪಿ ಗಾರ್ಡನ್, ಸೀಲನೈಕ್ಕನ್ಪಟ್ಟಿಯಲ್ಲಿ ಮಧ್ಯಾಹ್ನ 12ರಿಂದ 3ಗಂಟೆವರೆಗೆ ಸಮಾವೇಶಕ್ಕೆ ಪೊಲೀಸರು ಅನುಮತಿ ನೀಡಿದ್ದು, ಪೊಲೀಸರು ವಿಧಿಸಿರುವ ಮಾರ್ಗಸೂಚಿಯನ್ನು ಪಕ್ಷದ ಸದಸ್ಯರು ಅನುಸರಿಸಬೇಕು ಎಂದು ಕಟ್ಟು ನಿಟ್ಟಾಗಿ ಸೂಚನೆ ನೀಡಲಾಗಿದೆ.
ಈ ಕುರಿತು ಪಕ್ಷ ಕೂಡ ಜನರಿಗೆ ಮನವಿ ಮಾಡಿದ್ದು , ಕ್ಯೂಆರ್ ಕೋಡ್ ಹೊಂದಿಲ್ಲದ ಪಕ್ಷದ ಸದಸ್ಯರು ಮತ್ತು ಜನರಿಗೆ ಯಾವುದೇ ಕಾರಣಕ್ಕೂ ಸಮಾವೇಶದಲ್ಲಿ ಭಾಗವಹಿಸಲು ಅವಕಾಶ ಇಲ್ಲ. ಭದ್ರತೆ ಕಾರಣದಿಂದ ಸಮಾವೇಶಕ್ಕೆ ಗರ್ಭಿಣಿಯರು ಮತ್ತು ಹಿರಿಯ ನಾಯಕರು ಬಾರದಂತೆ ಮನವಿ ಮಾಡಿದ್ದಾರೆ. ಸಮಾವೇಶದ ನೇರ ಪ್ರಸಾರವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಲಾಗುವುದು ಎಂದು ತಿಳಿಸಿದೆ.



