ಹೊಸದಿಗಂತ ವರದಿ ಬೆಳಗಾವಿ:
ನನ್ನನ್ನು ಯಾವಾಗ ಮುಖ್ಯಮಂತ್ರಿ ಮಾಡಬೇಕೆಂಬುದರ ಕುರಿತು ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೊಣವಿನಕೆರೆ ಕಾಡಸಿದ್ಧೇಶ್ವರ ಮಠದ ಕರಿವೃಷಭ ದೇಶೀಕೇಂದ್ರ ಶಿವಯೋಗೀಶ್ವರ ಸ್ವಾಮೀಜಿಗಳು ನಾನು ಸಿಎಂ ಆಗಬೇಕು ಎಂದಿದ್ದಾರೆ. ಅದು ಅವರ ಬಯಕೆ, ಆದರೆ ಈ ಬಗ್ಗೆ ಪಕ್ಷ ಯಾವಾಗ ಮಾಡಬೇಕೋ ಆಗ ನಿರ್ಧಾರ ಮಾಡುತ್ತದೆ. ಹೈ ಕಮಾಂಡ್ ನಿರ್ಧಾರಕ್ಕೆ ನಾನು ಬದ್ಧ ಎಂದರು.
ರಾಜ್ಯದ ಜನರು ನಮಗೆ ಐದು ವರ್ಷ ಆಡಳಿತ ಮಾಡಲು ಅವಕಾಶ ನೀಡಿದ್ದಾರೆ. ಅವರ ನಿರೀಕ್ಷೆಗೆ ತಕ್ಕಂತೆ ನಾವು ಆಡಳಿತ ನೀಡಬೇಕು. ಪ್ರಸಕ್ತ ವರ್ಷ ಸ್ವಲ್ಪ ಮಳೆಯಾಗಿದೆ. ಒಂದು ದಿನ ಮಳೆ ಬರದಿದ್ದರೆ ಸರಕಾರಕ್ಕೆ ಒಂದು ಸಾವಿರ ಕೋಟಿ ರೂ. ನಷ್ಟವಾಗುತ್ತದೆ. ವಿದ್ಯುತ್ ಬಿಲ್ ಹೆಚ್ಚಾಗುತ್ತದೆ. ಆದರೆ ನಾವು ರೈತರಿಗೆ ಕಡಿಮೆ ದರದಲ್ಲಿ ನೀಡುತ್ತೇವೆ. ಇಂಧನ ಸಚಿವ ಕೆ.ಜೆ.ಜಾರ್ಜ್ ಅವರು ಅದನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ ಎಂದು ತಿಳಿಸಿದರು.
ನೀರಾವರಿ ಬಳಕೆದಾರ ಸಂಘಗಳನ್ನು ಕ್ರಿಯಾಶೀಲ ಮಾಡಿದ್ದೇನೆ. ಎತ್ತಿನಹೋಳೆ ನೀರು ತರಲು ನಿಯಮ ಮಾಡಲಾಗಿದೆ. ಅದು ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರುವರೆಗೂ ಹೋಗಬೇಕು. ಮಧ್ಯದಲ್ಲಿ ಯಾರಾದರೂ ಪೈಪ್ ಲೈನ್ ಹಾಕಿದರೆ ಕಷ್ಟವಾಗುತ್ತದೆ. ಅದಕ್ಕಾಗಿ ಕಾನೂನು ತರಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.
ಗಡಿಭಾಗದಲ್ಲಿರುವವರಿಗೆ ಮಹಾರಾಷ್ಟ್ರ ಸರಕಾರ ಆರೋಗ್ಯ ಇಲಾಖೆ ಯೋಜನೆ ಜಾರಿಗೊಳಿಸುತ್ತಿರುವ ಬಗ್ಗೆ ಸೂಕ್ತ ಉತ್ತರ ನೀಡಲಾಗುವುದು ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರು, ನಮ್ಮ ಮತ್ತು ಡಿ.ಕೆ.ಶಿವಕುಮಾರ ನಡುವೆ ಆಂತರಿಕ ಭಿನ್ನಾಭಿಪ್ರಾಯ ಇದೆ. ಬಹಿರಂಗವಾಗಿ ಇಲ್ಲ ಎನ್ನುವ ಹೇಳಿಕೆಗೆ ಉತ್ತರಿಸಿದ ಡಿಕೆಶಿ, ಯಾವುದೇ ಆಂತರಿಕ ಅಥವಾ ಬಹಿರಂಗ ಭಿನ್ನಾಭಿಪ್ರಾಯ ನಮ್ಮಲ್ಲಿ ಇಲ್ಲ ಎಂದು ಸ್ಪಷ್ಟಪಡಿಸಿದರು.