ಹೊಸದಿಗಂತ ವರದಿ, ದಾವಣಗೆರೆ:
ಷೇರು ಮಾರುಕಟ್ಟೆಯಲ್ಲಿ ಬಂಗಾರದ ಮೇಲೆ ಹೂಡಿಕೆ ಮಾಡಿದರೆ ಹೆಚ್ಚು ಕಮಿಷನ್ ಪಡೆಯಬಹುದು ಎಂಬ ಆಸೆ ತೋರಿಸಿ ವೈದ್ಯರೊಬ್ಬರಿಗೆ 2.40 ಕೋಟಿ ವಂಚಿಸಿರುವ ಘಟನೆ ನಗರದಲ್ಲಿ ನಡೆದಿದೆ.
ವೈದ್ಯರಿಗೆ ಟೆಲಿಗ್ರಾಂ, ವಾಟ್ಸಾಪ್ ಚಾಟ್ ಮಾಡಲು ಆರಂಭಿಸಿದ್ದ ಅಪರಿಚಿತನು, ಕೆಲ ದಿನಗಳಲ್ಲಿ ಫೇಸ್ ಬುಕ್ ಮೂಲಕ ಸ್ನೇಹಿತನಾಗಿದ್ದಾನೆ. ಸಿಎಂಸಿ ಮಾರ್ಕೆಟ್ ಎಂಬ ಜಾಲತಾಣದಲ್ಲಿ ಬಂಗಾರದ ಮೇಲೆ ಹೂಡಿಕೆ ಮಾಡಿದರೆ ಹೆಚ್ಚು ಲಾಭ ಗಳಿಸಬಹುದಾಗಿದ್ದು, ಇಬ್ಬರೂ ಒಟ್ಟಿಗೆ ಸೇರಿ ಹಣ ಹೂಡಿಕೆ ಮಾಡೋಣ ಎಂದು ವೈದ್ಯರನ್ನು ನಂಬಿಸಿದ್ದನು. ಅದರಂತೆ, ವಂಚಕನು ವಾಟ್ಸಪ್ ನಲ್ಲಿ ಕಳುಹಿಸಿದ ಲಿಂಕ್ ಮೂಲಕ ಸಿಎಂಸಿ ಮಾರ್ಕೆಟ್ ವೆಬಸೈಟ್ ನಲ್ಲಿ ಕಳೆದ ಫೆ.18ರಿಂದ ಮೇ 15ರವರೆಗೆ ಒಟ್ಟು 2,40,92,150 ರೂ.ಗಳನ್ನು ವೈದ್ಯರು ಹೂಡಿಕೆ ಮಾಡಿದ್ದಾರೆ. ನಾನಾ ಬ್ಯಾಂಕ್ ಖಾತೆಗಳಿಗೆ ಒಟ್ಟು 17 ಬಾರಿ ಹಣ ವರ್ಗಾವಣೆ ಮಾಡಿರುವ ವೈದ್ಯರು, ಮಾರ್ಚ್ 11ರಂದು 5 ಲಕ್ಷ ರೂ. ವಿತ್ ಡ್ರಾ ಮಾಡಿದ್ದಾರೆ. ನಂತರ ಹಣ ವಿತ್ ಡ್ರಾ ಮಾಡಲು ನಡೆಸಿದ ಹತ್ತಾರು ಪ್ರಯತ್ನಗಳು ವಿಫಲವಾಗಿದ್ದರಿಂದ ಅನುಮಾನಗೊಂಡ ವೈದ್ಯರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಕುರಿತು ದಾವಣಗೆರೆ ಸಿಇಎನ್ ಅಪರಾಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.