ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಂಬೈ-ದೆಹಲಿ ನಡುವಿನ ವಿಸ್ತಾರಾ (Vistara)ವಿಮಾನದಲ್ಲಿ 23 ವರ್ಷದ ಪ್ರಯಾಣಿಕರೊಬ್ಬರು ವಿಮಾನ ಟೇಕ್ ಆಫ್ ಆಗುವುದಕ್ಕಿಂತ ಸ್ವಲ್ಪ ಹೊತ್ತು ಮೊದಲು ಹೈಜಾಕ್ ಮಾಡುವ ಯೋಜನೆ (hijacking plan) ಬಗ್ಗೆ ಫೋನ್ನಲ್ಲಿ ಮಾತನಾಡಿದ್ದು, ಆತನನ್ನು ಬಂಧಿಸಲಾಗಿದೆ.
ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗುರುವಾರ ಸಂಜೆ 6.30 ರ ಸುಮಾರಿಗೆ ಈ ಘಟನೆ ಸಂಭವಿಸಿದೆ. ತಡವಾಗಿ ಬೆಳಕಿಗೆ ಬಂದಿದೆ.
ದೆಹಲಿಗೆ ವಿಮಾನ ಟೇಕ್ ಆಫ್ ಆಗುವ ಮುನ್ನ ಎಲ್ಲಾ ಪ್ರಯಾಣಿಕರು ತಮ್ಮ ಸೀಟಿನಲ್ಲಿ ಕುಳಿತಿದ್ದರು. ಕ್ಯಾಬಿನ್ ಸಿಬ್ಬಂದಿ ತಮ್ಮ ಕೆಲಸದಲ್ಲಿ ತೊಡಗಿದ್ದರು. ಆಗ ಕ್ಯಾಬಿನ್ ಸಿಬ್ಬಂದಿ ಮತ್ತು ಇತರ ಸಹ ಪ್ರಯಾಣಿಕರು ವ್ಯಕ್ತಿಯೊಬ್ಬ ತಮ್ಮ ಮೊಬೈಲ್ ಫೋನ್ನಲ್ಲಿ ಮಾತನಾಡುವುದನ್ನು ಕೇಳಿಸಿಕೊಂಡಿದ್ದಾರೆ. ಆ ವ್ಯಕ್ತಿ ‘ಅಹಮದಾಬಾದ್ ಕಾ ಫ್ಲೈಟ್ ಬೋರ್ಡ್ ಕರ್ನೆ ವಾಲಾ ಹೈಂ. ಕೋಯಿ ಭಿ ದಿಕ್ಕತ್ ಹೋ ತೋ ಮುಝೆ ಕಾಲ್ ಕರ್ನಾ. (ಅಹಮದಾಬಾದ್ಗೆ ವಿಮಾನ ಹತ್ತುತ್ತೇನೆ. ನಿಮಗೆ ಯಾವುದೇ ತೊಂದರೆ ಎದುರಾದರೆ ನನಗೆ ಕರೆ ಮಾಡಿ). ಹೈಜಾಕ್ ಕಾ ಸಾರಾ ಪ್ಲಾನಿಂಗ್ ಹೇ. ಉಸ್ಕಾ ಸಾರಾ ಆಕ್ಸೆಸ್ ಹೈ, ಚಿಂತಾ ಮತ್ ಕರ್ನಾ.’ (ಹೈಜಾಕ್ ಮಾಡಲು ಎಲ್ಲಾ ಯೋಜನೆಗಳನ್ನು ಮಾಡಲಾಗಿದೆ. ಚಿಂತೆ ಮಾಡಬೇಡಿ)’ ಎಂದು ಹೇಳುತ್ತಿರುವುದು ಕೇಳಿದೆ.
ಈ ಸಂಭಾಷಣೆಯನ್ನು ಕೇಳಿದ ನಂತರ, ಪಕ್ಕದಲ್ಲಿ ಕುಳಿತಿದ್ದ ಪ್ರಯಾಣಿಕರು ಹೆದರಿದ್ದು, ಅವರಲ್ಲಿ ಹಲವರು ಎದ್ದು ನಿಂತು ಕ್ಯಾಬಿನ್ ಸಿಬ್ಬಂದಿ ವಿಮಾನದ ಭದ್ರತಾ ಸಿಬ್ಬಂದಿಯನ್ನು ಕರೆಸಿ ಫೋನ್ನಲ್ಲಿ ಮಾತನಾಡುತ್ತಿದ್ದ ಪ್ರಯಾಣಿಕರನ್ನು ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ಗೆ ಹಸ್ತಾಂತರಿಸಿದರು ಎಂದು ಅಧಿಕಾರಿ ಹೇಳಿದ್ದಾರೆ.
ರಿತೇಶ್ ಜುನೇಜಾ ಎಂದು ಗುರುತಿಸಲಾದ ಪ್ರಯಾಣಿಕರನ್ನು ಸಹರ್ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ. ಕ್ಯಾಬಿನ್ ಸಿಬ್ಬಂದಿ ನೀಡಿದ ದೂರಿನ ಆಧಾರದ ಮೇಲೆ ಅವರ ವಿರುದ್ಧ ಅಪರಾಧ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಹೇಳಿದರು. ಅದೇ ವೇಳೆ ಆರೋಪಿ ಮಾನಸಿಕ ಅಸ್ವಸ್ಥನಾಗಿದ್ದು, 2021ರಿಂದ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿರುವುದು ಬೆಳಕಿಗೆ ಬಂದಿದೆ ಎಂದರು.