ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದಲ್ಲಿ ಹಿಂದುಗಳು ಇರುವುದರಿಂದಲೇ ಇಂದಿಗೂ ಪ್ರಜಾಪ್ರಭುತ್ವ ಉಳಿದಿದೆ ಎಂದು ಚಿತ್ರ ಸಾಹಿತಿ ಜಾವೇದ್ ಅಖ್ತರ್ ಅಭಿಪ್ರಾಯಪಟ್ಟಿದ್ದಾರೆ.
ಮಹಾರಾಷ್ಟ್ರ ನವನಿರ್ಮಾಣ ಸೇನೆಯ ರಾಜ್ ಠಾಕ್ರೆ ಆಯೋಜಿಸಿದ್ದ ದೀಪೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಜಗತ್ತಿನಲ್ಲಿ ಇಂದು ಅಸಹಿಷ್ಣುತೆ ಹೆಚ್ಚಾಗಿದೆ. ಆದರೆ ಭಾರತದಲ್ಲಿ ಮಾತ್ರ ಎಲ್ಲಾ ಧರ್ಮ, ಜಾತಿಯ ಜನರು ಒಂದಾಗಿ ಬದುಕುತ್ತಿದ್ದಾರೆ. ಈ ಕೂಡುಬಾಳುವ ಸಂಸ್ಕೃತಿ ನಮಗೆ ಬಂದಿದ್ದೇ ಹಿಂದು ಧರ್ಮದಿಂದ. ಹಿಂದು ಎನ್ನುವುದು ಕೇವಲ ಒಂದು ಧರ್ಮವಲ್ಲ. ಅದು ಈ ನೆಲದ ಸಂಸ್ಕೃತಿಯೂ ಹೌದು’ ಎಂದಿದ್ದಾರೆ.
‘ಮೂರ್ತಿ ಪೂಜೆ ಮಾಡಿದರೂ ಹಿಂದು, ಪ್ರಕೃತಿ ಪೂಜಿಸಿದರೂ ಹಿಂದು, ದೇವನೊಬ್ಬ ಎಂದರೂ ಹಿಂದು, ದೇವನಿಲ್ಲ ಎಂದರೂ ಹಿಂದು, ಮುಕ್ಕೋಟಿ ದೇವರನ್ನು ಪೂಜಿಸಿದರೂ ಹಿಂದು. ಹೀಗಾಗಿಯೇ ಎಲ್ಲರನ್ನೂ ಮತ್ತು ಎಲ್ಲವನ್ನೂ ಒಳಗೊಳ್ಳುವ ಸಹಿಷ್ಣುತೆ ಹಿಂದು ಧರ್ಮಕ್ಕಿದೆ. ಹಿಂದು ಧರ್ಮ ನನ್ನ ಮೇಲೂ ಪ್ರಭಾವ ಬೀರಿದೆ. ಈ ಧರ್ಮದಿಂದಲೇ ಭಾರತದಲ್ಲಿ ಈವರೆಗೂ ಪ್ರಜಾಪ್ರಭುತ್ವ ಉಳಿದಿದೆ. ಭವಿಷ್ಯದಲ್ಲಿ ಗೊತ್ತಿಲ್ಲ’ ಎಂದು ಅಖ್ತರ್ ಹೇಳಿದ್ದಾರೆ.
‘ಭಗವಾನ್ ರಾಮ ಹಾಗೂ ಸೀತಾ ಅವರಿದ್ದ ನೆಲದಲ್ಲಿ ಜನಿಸಿದ್ದೇ ನನ್ನ ಪುಣ್ಯ. ಅವರು ಕೇವಲ ಹಿಂದು ದೇವರು ಮಾತ್ರವಲ್ಲ, ಈ ನೆಲದ, ಪರಂಪರೆಯ ಸ್ವರೂಪ’ ಎಂದು ಹೇಳಿದ ಅಖ್ತರ್, ಜೈ ಶ್ರೀರಾಮ್ ಮಂತ್ರವನ್ನು ಜಪಿಸಿ, ಸಭಿಕರಿಗೂ ಜಪಿಸಲು ಹೇಳಿದರು.