ಐತಿಹಾಸಿಕ ವೈರಮುಡಿ ಉತ್ಸವ: ರಾಜಮುಡಿ ಮೇಲುಕೋಟೆಗೆ ರವಾನೆ

ಹೊಸದಿಗಂತ ವರದಿ ಮಂಡ್ಯ :

ಮೇಲುಕೋಟೆ ಶ್ರೀ ಚೆಲುವನಾರಾಯಣಸ್ವಾಮಿಯ ಐತಿಹಾಸಿಕ ಶ್ರೀ ವೈರಮುಡಿ ಬ್ರಹ್ಮೋತ್ಸವದ ಹಿನ್ನೆಲೆಯಲ್ಲಿ ವಜ್ರಖಚಿತ ವೈರಮುಡಿ, ರಾಜಮುಡಿ ಮತ್ತು ಇತರ ವಜ್ರಾಭರಣಗಳನ್ನು ಜಿಲ್ಲಾ ಖಜಾನೆಯಿಂದ ಗುರುವಾರ ಬೆಳಗ್ಗೆ ಮೇಲುಕೋಟೆಗೆ ಕೊಂಡೊಯ್ಯಲಾಯಿತು.

ಜಿಲ್ಲಾ ಖಜಾನೆಯ ಭದ್ರತಾ ಕೊಠಡಿಯಲ್ಲಿಟ್ಟಿದ್ದ ವೈರಮುಡಿ ಸಹಿತ ವಜ್ರಾಭರಣಗಳ ಎರಡು ಗಂಟುಗಳನ್ನು ಜಿಲ್ಲಾಧಿಕಾರಿ ಡಾ. ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ಯತೀಶ್, ಅಪರ ಜಿಲ್ಲಾಧಿಕಾರಿ ಡಾ. ಎಚ್.ಎಲ್. ನಾಗರಾಜು, ನೇತೃತ್ವದಲ್ಲಿ ಬೆಳಗ್ಗೆ 7.45 ಗಂಟೆಗೆ ಹೊರ ತೆಗೆಯಲಾಯಿತು. ಬಳಿಕ ಖಜಾನೆ ಮುಖ್ಯದ್ವಾರದಲ್ಲಿ ಆಭರಣಗಳ ಗಂಟುಗಳನ್ನಿಟ್ಟು ಅವುಗಳಿಗೆ ಹಾರ ತೊಡಿಸಿ, ಸಾಂಪ್ರದಾಯಿಕವಾಗಿ ಪ್ರಥಮ ಪೂಜೆ ನೆರವೇರಿಸಲಾಯಿತು. ಈ ವೇಳೆ ಅಧಿಕಾರಿಗಳು ವೈರಮುಡಿ ಮತ್ತು ವಜ್ರಾಭರಣಗಳಿದ್ದ ಗಂಟುಗಳಿಗೆ ಶ್ರದ್ಧಾಭಕ್ತಿಯಿಂದ ಪೂಜೆ ಸಲ್ಲಿಸಿದರು.

ಕೇವಲ 15 ನಿಮಿಷದ ಅವಧಿಯಲ್ಲಿ ಪೂಜೆ ಮುಗಿಸಿ, ಆಭರಣಗಳ ಗಂಟುಗಳನ್ನು ಶ್ರೀಚಲುವನಾರಾಯಣಸ್ವಾಮಿ ದೇವಾಲಯದ ಮೊದಲ ಸ್ಥಾನೀಕಂ ಕರಗಂ ರಾಮಪ್ರಿಯ ಅವರಿಗೆ ಹಸ್ತಾಂತರಿಸಲಾಯಿತು. ಬೆಳಗ್ಗೆ 8 ಗಂಟೆಗೆ ಖಜಾನೆ ಆವರಣದಿಂದ ವಾಹನ ನಿರ್ಗಮಿಸಿತು.

ಈ ಸಂದರ್ಭದಲ್ಲಿ ಪಾಂಡವಪುರ ಉಪ ವಿಭಾಗಾಧಿಕಾರಿ ಮಾರುತಿ, ಪಾಂಡವಪುರ ಜಿ.ಎನ್. ಶ್ರೇಯಸ್, ಪೊಲೀಸ್ ಸೇರಿದಂತೆ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!