ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ನಿಜವಾದ ಇತಿಹಾಸವನ್ನು ಯುವ ಜನಾಂಗಕ್ಕೆ ತಿಳಿಸುವ ಜವಾಬ್ದಾರಿಯನ್ನು ಶಿಕ್ಷಣ ವ್ಯವಸ್ಥೆಯು ತೆಗೆದುಕೊಳ್ಳಬೇಕು. ಆದ್ರೆ ಮೊಘಲರ ಆಡಳಿತದ ಸಮಯದಲ್ಲಿ ನಡೆದ ದೌರ್ಜನ್ಯಗಳು ಮತ್ತು ದೇವಾಲಯಗಳ ಧ್ವಂಸದಂತಹ ಐತಿಹಾಸಿಕ ತಪ್ಪುಗಳನ್ನು ಪಠ್ಯಪುಸ್ತಕಗಳು ಮರೆಮಾಚಿವೆ ಎಂದು ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಟೀಕಿಸಿದ್ದಾರೆ.
ವಿಜಯವಾಡದಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ ಪಠ್ಯಪುಸ್ತಕಗಳಲ್ಲಿ ಮೊಘಲರ ಆಡಳಿತವನ್ನು ಗೌರವಾನ್ವಿತವಾಗಿ ಚಿತ್ರಿಸಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು.
ಯಾವುದೇ ಶಾಲೆಯು ದೇವಾಲಯಗಳನ್ನು ಧ್ವಂಸಗೊಳಿಸಿರುವುದು, ಮಹಿಳೆಯರನ್ನು ಗುಲಾಮರನ್ನಾಗಿಸಿರುವುದು, ಹಿಂದುಗಳ ಮೇಲೆ ದೌರ್ಜನ್ಯ ನಡೆಸಿರುವುದು ಇತ್ಯಾದಿಗಳನ್ನು ಕಲಿಸಿಲ್ಲ. ಇತಿಹಾಸವನ್ನು ತಿರುಚಿ, ಮೊಘಲರನ್ನು ಕೀರ್ತಿಸುವಂತೆ ಚಿತ್ರಿಸಲಾಗಿದೆ. ಇತಿಹಾಸಕಾರರು ಮೊಘಲರ ಕುರಿತಾದ ಒಂದು ಆಯಾಮದ ದೃಷ್ಟಿಕೋನವನ್ನು ಮಾತ್ರ ಒತ್ತಿಹೇಳಿದ್ದಾರೆ. ಇತರ ರಾಜವಂಶಗಳ ಕೊಡುಗೆಗಳನ್ನು ಕಡೆಗಣಿಸಲಾಗಿದೆ ಎಂದರು.
ಇಲ್ಲಿ ಮೊಘಲ್ ಚಕ್ರವರ್ತಿ ಔರಂಗಜೇಬನನ್ನು`ಮಹಾನ್’ ಎಂದು ಕರೆಯಲಾಗಿದೆ, ಆದರೆ ಅವನು ಹಿಂದುಗಳ ಮೇಲೆ ಧಾರ್ಮಿಕ ಕಾರಣಕ್ಕಾಗಿ ಜಿಜಿಯಾ ತೆರಿಗೆ ವಿಧಿಸಿದ್ದನ್ನು ಯಾರೂ ತಿಳಿಸಿಲ್ಲ. ರಕ್ತದ ಚರಿತ್ರೆಯನ್ನು ಮರೆಮಾಚಲಾಗಿದೆ, ಸತ್ಯವನ್ನು ಅಳಿಸಲಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಕಾಂಗ್ರೆಸ್ ಪಕ್ಷವು ತನ್ನ ಆಡಳಿತದ ಅವಧಿಯಲ್ಲಿ ಇತಿಹಾಸವನ್ನು ತಿರುಚಿದೆ ಎಂದು ಆರೋಪಿಸಿದರು. ಇದರಿಂದ ಭಾರತೀಯ ಸಂಸ್ಕೃತಿಯ ನಿಜವಾದ ಚಿತ್ರಣಕ್ಕೆ ಧಕ್ಕೆಯಾಗಿದೆ ಎಂದು ಹೇಳಿದರು.